ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಐಡೆಂಟಿಟಿ ಹೊಂದಿರುವ ನಟ ಕ್ರೇಜಿಸ್ಟಾರ್ ರವಿಚಂದ್ರನ್. ಕನ್ನಡಿಗ ಅನ್ನೋ ವಿಭಿನ್ನ ಚಿತ್ರ ಮಾಡಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಇದೀಗ ಮತ್ತೊಂದು ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವಿಶೇಷ ಅಂದ್ರೆ ಕನ್ನಡಿಗ ಚಿತ್ರ ನಿರ್ಮಾಣ ಮಾಡಿದ್ದ ನಿರ್ಮಾಪಕ ಎನ್.ಎಸ್.ರಾಜಕುಮಾರ್ ಜೊತೆ ಕ್ರೇಜಿಸ್ಟಾರ್ ಹೊಸ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ 'ಗೌರಿ' ಅಂತಾ ಟೈಟಲ್ ಇಟ್ಟಿದ್ದು, ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಶೇಷಾದ್ರಿಪುರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನೆರವೇರಿತು.
ಕರುನಾಡ ಚಕ್ರವರ್ತಿ ಶಿವ ರಾಜ್ಕುಮಾರ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿ ಶುಭ ಕೋರಿದರು. ಮೂವತ್ತಕ್ಕೂ ಅಧಿಕ ವರ್ಷಗಳ ಕಾಲ ಡಾ. ರಾಜ್ಕುಮಾರ್ ಅವರ ಬಳಿ ಸಹಾಯಕರಾಗಿ ಕಾರ್ಯ ನಿರ್ವಹಿಸಿರುವ ಚನ್ನ ಅವರು ಕ್ಯಾಮರಾ ಚಾಲನೆ ಮಾಡಿದರು.
ಬಳಿಕ ಮಾತನಾಡಿದ ಕ್ರೇಜಿಸ್ಟಾರ್ ರವಿಚಂದ್ರನ್, ಕನ್ನಡ ಚಿತ್ರರಂಗಕ್ಕೆ ಈಗ ಒಳ್ಳೆಯ ಕಾಲ. ವಿಶ್ವದಾದ್ಯಂತ ಕನ್ನಡ ಸಿನಿಮಾಗಳು ಹೆಸರು ಮಾಡುತ್ತಿವೆ. ಅದರಲ್ಲೂ ವಿಭಿನ್ನ ಕಥೆಯಿರುವ ಚಿತ್ರಗಳನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. "ಗೌರಿ" ಸಹ ವಿಭಿನ್ನ ಕಥೆಯುಳ್ಳ ಚಿತ್ರ. ಇಡೀ ಸಿನಿಮಾ ಪೂರ್ತಿ ಕೇವಲ ಮೂರೇ ಪಾತ್ರಗಳಿರುತ್ತದೆ.
ಕೆಲವು ಪ್ರಾಣಿಗಳನ್ನು ಸಹ ಬಳಸಿಕೊಳ್ಳುತ್ತಿರುವುದಾಗಿ ನಿರ್ದೇಶಕರು ಹೇಳಿದ್ದಾರೆ. ದಾಂಡೇಲಿಯಲ್ಲಿ ಬಹು ಭಾಗದ ಚಿತ್ರೀಕರಣ ನಡೆಯಲಿದೆ. ಹೊಸ ವರ್ಷಕ್ಕೆ ಹೊಸ ತರಹದ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇನ್ನು ರಾಜ್ಕುಮಾರ್ ಎಂಬ ಹೆಸರು ಸದಾ ನನ್ನ ಜೊತೆ ಇರುತ್ತದೆ ಎಂಬುದಕ್ಕೆ ಈ ಚಿತ್ರದ ನಿರ್ಮಾಪಕರ ಹೆಸರೇ ನಿದರ್ಶನ ಎಂದು ಹೇಳಿದರು.
ನಿರ್ದೇಶಕ ಅನೀಸ್ ಮಾತನಾಡಿ, ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಖ್ಯಾತ ನಟರಾದ ರವಿಚಂದ್ರನ್ ಅವರು ನನ್ನ ಮೊದಲ ನಿರ್ದೇಶನದ ಚಿತ್ರದಲ್ಲಿ ನಾಯಕರಾಗಿರುವುದು ಸಂತೋಷಕರ ವಿಷಯ. ಮುಂಬೈನ ಬರ್ಕಾ ಬಿಷ್ಟ್ ಈ ಚಿತ್ರದ ನಾಯಕಿ. ಗ್ರೀಷ್ಮಾ ಎಂಬ ಬಾಲ ಕಲಾವಿದೆ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಒಟ್ಟು ಮೂರೇ ಪಾತ್ರಗಳು. ಇದೊಂದು ಕೌಟುಂಬಿಕ ಚಿತ್ರ. ಇದುವರೆಗೂ ಸಾಕಷ್ಟು ಫ್ಯಾಮಿಲಿ ಚಿತ್ರಗಳು ಬಂದಿವೆ. ಈ ಚಿತ್ರದಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಏಕೆ ಸಮಸ್ಯೆಗಳು ಬರುತ್ತವೆ ಎಂಬುದನ್ನು ತೋರಿಸುತ್ತಿದ್ದೇವೆ. ಅವರಿಬ್ಬರ ನಡುವಿನ ಪ್ರೀತಿಗೆ ಯಾಕೆ ಸಮಸ್ಯೆ ಎದುರಾಗುತ್ತವೆ ಮತ್ತು ಅವರು ಅದನ್ನು ಹೇಗೆ ಪರಿಹರಿಸಿಕೊಳ್ಳುತ್ತಾರೆ ಎಂದು ಹೇಳುವುದಕ್ಕೆ ಹೊರಟಿದ್ದೇವೆ.
"ಗೌರಿ" ಚಿತ್ರಕ್ಕೆ "ಶಂಕರ B/H " ಎಂಬ ಅಡಿಬರಹವಿದೆ. ಇದೊಂದು ವಿಭಿನ್ನವಾದ ಚಿತ್ರಕಥೆ ಎನ್ನಬಹುದು. ಕೌಟುಂಬಿಕ ಚಿತ್ರವಾದರೂ, ಕಥೆ ಕಾಡಿನಲ್ಲಿ ನಡೆಯುತ್ತದೆ. ದಾಂಡೇಲಿ, ಯಲ್ಲಾಪುರದಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು.
ಇದನ್ನೂ ಓದಿ: ವಸಿಷ್ಠ ಸಿಂಹರ ಲವ್ ಲಿ ಸಿನಿಮಾ ಅಡ್ಡಕ್ಕೆ ಸರ್ಪ್ರೈಸ್ ಭೇಟಿ ಕೊಟ್ಟ ಭಾವಿ ಪತ್ನಿ
ನನಗೆ ಕನ್ನಡದಲ್ಲಿ ಇದು ಮೊದಲನೆಯ ಚಿತ್ರ. ಅದರಲ್ಲೂ ದಕ್ಷಿಣ ಭಾರತದಲ್ಲೇ ಮೊದಲು ಎನ್ನಬಹುದು. ರವಿಚಂದ್ರನ್ ಸರ್ ಜೊತೆ ನಟಿಸುತ್ತಿರುವುದು ಸಂತಸ ತಂದಿದೆ ಎಂದು ನಾಯಕಿ ಬರ್ಕಾ ಬಿಷ್ಟ್ ತಿಳಿಸಿದ್ದಾರೆ. ಇದು ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ 15ನೇ ಚಿತ್ರ ಅಂತಾ ನಿರ್ಮಾಪಕ ಎನ್ ಎಸ್ ರಾಜಕುಮಾರ್ ತಿಳಿಸಿದರು. ಸತೀಶ್ ಅವರ ಕ್ಯಾಮರಾ ವರ್ಕ್ ಈ ಚಿತ್ರಕ್ಕೆ ಇದೆ.