ಮುಂಬೈ: ಮುಂಬೈನ ಝವೇರಿ ಬಜಾರ್ ಪ್ರದೇಶದಲ್ಲಿನ ಉದ್ಯಮಿಯೊಬ್ಬರ ಕಚೇರಿ ಮೇಲೆ ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು ದಾಳಿ ನಡೆಸಿದ ದುಷ್ಕರ್ಮಿಗಳು 2 ಕೋಟಿ ರೂಪಾಯಿ ಲೂಟಿ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಝವೇರಿ ಬಜಾರ್ನಲ್ಲಿರುವ ಉದ್ಯಮಿಯೊಬ್ಬರ ಕಚೇರಿ ಮೇಲೆ ಇಡಿ ಅಧಿಕಾರಿಗಳಂತೆ ಬಿಂಬಿಸಿಕೊಂಡ ನಾಲ್ವರು ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ಪ್ರಕರಣದಲ್ಲಿ ಲೋಕಮಾನ್ಯ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ 4 ಅಪರಿಚಿತ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 394, 506 (2) ಮತ್ತು 120 ಬಿ ಅಡಿ ಪ್ರಕರಣ ದಾಖಲಾಗಿದೆ.
ಉದ್ಯಮಿಯ ಕಚೇರಿಯಲ್ಲಿರುವ ನೌಕರನ ಕೈಗೆ ಕೋಳ ತೊಡಿಸಿದ ನಂತರ ದುಷ್ಕರ್ಮಿಗಳು ಕಚೇರಿಯೊಳಗೆ ದಾಳಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದಾದ ಬಳಿಕ ಆರೋಪಿಗಳು ಕಚೇರಿಯಲ್ಲಿದ್ದ 25 ಲಕ್ಷ ರೂಪಾಯಿ ನಗದು ಹಾಗೂ ಮೂರು ಕೆಜಿ ಚಿನ್ನಾಭರಣ ದೋಚಿದ್ದಾರೆ. ಲೂಟಿ ಮಾಡಲಾದ ಚಿನ್ನದ ಮಾರುಕಟ್ಟೆ ಮೌಲ್ಯ 1 ಕೋಟಿ 70 ಲಕ್ಷ ರೂಪಾಯಿಗಳು ಎಂದು ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಮಾನ್ಯ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲಿಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಏತನ್ಮಧ್ಯೆ, ಸಿಸಿಟಿವಿ ಸಹಾಯದಿಂದ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಲೂಟಿಗೊಳಗಾದ ಅಂಗಡಿ ಮತ್ತು ಸುತ್ತಮುತ್ತಲಿನ ಸಿಸಿಟಿವಿಗಳ ಸಹಾಯದಿಂದ ಆರೋಪಿಗಳ ಪತ್ತೆಗಾಗಿ ಶೋಧ ನಡೆಯುತ್ತಿದೆ. ಮುಂಬೈನ ಝವೇರಿ ಮಾರುಕಟ್ಟೆಯಲ್ಲಿ ನಡೆದ ಈ ಆಘಾತಕಾರಿ ಘಟನೆಯಿಂದ ವ್ಯಾಪಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ ಪ್ರದೇಶದಲ್ಲಿ ಬೋಗಸ್ ಇಡಿ ಅಧಿಕಾರಿಗಳು ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವ ಮೊದಲ ಪ್ರಕರಣ ಇದಾಗಿದೆ. ಈ ಹಿಂದೆ ಕೂಡ ಜವೇರಿ ಬಜಾರ್ನಲ್ಲಿ ಆದಾಯ ತೆರಿಗೆ ಇಲಾಖೆ ಎಂದು ಹೇಳಿಕೊಂಡು ನಕಲಿ ದಾಳಿ ನಡೆಸಿ ಲೂಟಿ ಮಾಡಿದ ಘಟನೆ ನಡೆದಿತ್ತು.
ನಟಿ ನೋರಾ ಫತೇಹಿಗೆ ಸುಕೇಶ್ ಚಂದ್ರಶೇಖರ್ ತಿರುಗೇಟು: ಇನ್ನೊಂದೆಡೆ ವಂಚನೆಯ ಪ್ರಕರಣದಲ್ಲಿ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್ ತನಗೆ ಮನೆ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ನಟಿ ನೋರಾ ಫತೇಹಿ ಆರೋಪಿಸಿದ ನಂತರ, ಸುಕೇಶ್ ಚಂದ್ರಶೇಖರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ನೋರಾಗೆ ತಿರುಗೇಟು ನೀಡಿದ್ದಾರೆ. ಇಂದು ಅವಳು (ನೋರಾ) ಮನೆ ಕೊಡಿಸುವ ಭರವಸೆಯ ಬಗ್ಗೆ ಮಾತನಾಡಿದ್ದಾರೆ. ಆದರೆ, ಮೊರೊಕ್ಕೊದ ಕಾಸಾಬ್ಲಾಂಕಾದಲ್ಲಿ ತನ್ನ ಕುಟುಂಬಕ್ಕೆ ಮನೆ ಖರೀದಿಸಲು ಅವಳು ಈಗಾಗಲೇ ನನ್ನಿಂದ ದೊಡ್ಡ ಮೊತ್ತವನ್ನು ತೆಗೆದುಕೊಂಡಿದ್ದಾರೆ. 9 ತಿಂಗಳ ಹಿಂದೆ ಆಕೆ ಇಡಿ ಮುಂದೆ ನೀಡಿದ ಹೇಳಿಕೆಯಿಂದ ಪಾರಾಗಲು ಈ ಎಲ್ಲ ಹೊಸ ಕಥೆ ಕಟ್ಟುತ್ತಿದ್ದಾರೆ ಎಂದು ಸುಕೇಶ್ ಚಂದ್ರಶೇಖರ್ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: 'ಹಾಸನದಿಂದ ನಾನೇ ಜೆಡಿಎಸ್ ಅಭ್ಯರ್ಥಿ..': ಭವಾನಿ ರೇವಣ್ಣ ಸ್ವಯಂ ಘೋಷಣೆ