ತುಮಕೂರು: ತಾಲೂಕಿನ ಜಕ್ಕೇನಹಳ್ಳಿ ಬಳಿಯ ಎಂ. ಗೊಲ್ಲಹಳ್ಳಿ ಗ್ರಾಮದ ಬೆಟ್ಟದ ಮೇಲಿನ ಆಂಜನೇಯ ದೇವಾಲಯವೊಂದರ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ನಿಧಿಗಾಗಿ ಮಹಿಳೆಯನ್ನು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. 15 ದಿನಗಳ ಹಿಂದೆಯೇ ಕೊಲೆಯಾಗಿರಬಹುದು ಎಂದು ಹೇಳಲಾಗುತ್ತಿದೆ.
ದೇಗುಲದ ಬಳಿ ಕುರಿಗಾಹಿಗಳು ಕುರಿ ಮೇಯಿಸುತ್ತಿದ್ದಾಗ ದುರ್ವಾಸನೆ ಬಂದಿದೆ. ನಂತರ ದೇವಾಲಯದ ಅಕ್ಕಪಕ್ಕ ಪರಿಶೀಲಿಸಿದಾಗ ಮಹಿಳೆಯ ಕೂದಲು ಕಂಡು ಬಂದಿತ್ತು. ಅಲ್ಲದೆ ಮೃತದೇಹ ಸಂಪೂರ್ಣ ಗುರುತು ಸಿಗದಂತಾಗಿದೆ. ದೇವಾಲಯದ ಒಳಭಾಗದಲ್ಲಿರುವ ಆಂಜನೇಯ ವಿಗ್ರಹದ ಮುಂಭಾಗದಲ್ಲಿ ನಿಧಿಗಾಗಿ ಗುಂಡಿ ತೆಗೆದು ಪೂಜೆ ಸಲ್ಲಿಸಿರುವ ದೃಶ್ಯ ಕಂಡು ಬಂದಿದೆ.
ತಕ್ಷಣ ಕುರಿಗಾಹಿಗಳು ದೇವಾಲಯದ ಬಳಿ ಶವ ಬಿದ್ದಿರುವ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಗ್ರಾಮಸ್ಥರು ಗಾಬರಿಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಶವ ಪರೀಕ್ಷೆಯ ನಂತರ ತಿಳಿಯಲಿದೆ.
ನಿಧಿಗಾಗಿ ಕಿಡಿಗೇಡಿಗಳಿಂದ ದೇಗುಲ ನಾಶ
ಎಂ. ಗೊಲ್ಲಹಳ್ಳಿ ಗ್ರಾಮದ ಬೆಟ್ಟದ ಮೇಲಿರುವ ಆಂಜನೇಯಸ್ವಾಮಿ ದೇವಾಲಯದ ಬಳಿ ನಿಧಿಗಾಗಿ ಕಿಡಿಗೇಡಿಗಳು ಅಗೆದು ದೇವಾಲಯ ಆವರಣವನ್ನು ಹಾಳು ಮಾಡುತ್ತಿರುವ ಪ್ರಕರಣಗಳು ನಡೆಯುತ್ತಿವೆ. ದೇಗುಲ ಬೆಟ್ಟದ ಮೇಲಿರುವ ಕಾರಣ ಗ್ರಾಮಸ್ಥರು ಆ ಕಡೆ ಸುಳಿಯುತ್ತಿರಲಿಲ್ಲ. ಹುಣ್ಣಿಮೆ, ಅಮವಾಸ್ಯೆಗಳಂದು ಈ ದೇವಾಲಯದಲ್ಲಿ ನಿಗೂಢವಾಗಿ ಪೂಜೆ ನಡೆಯುತ್ತಿದ್ದ ಬಗ್ಗೆ ಅನುಮಾನ ಮೂಡುತ್ತಿತ್ತು.