ತುಮಕೂರು: ಹೇಮಾವತಿ ನದಿ ನೀರು ಹಂಚಿಕೆ ಕುರಿತು ಮಾಜಿ ಶಾಸಕ ಸುರೇಶಗೌಡ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಸಚಿವ ಎಸ್.ಆರ್. ಶ್ರೀನಿವಾಸ್ ಆರೋಪ ಮಾಡಿದ್ದಾರೆ.
ಹೇಮಾವತಿ ನೀರನ್ನು ಎಚ್.ಡಿ.ರೇವಣ್ಣ ಇರಬಹುದು ಯಾರು ಅಡ್ಡ ಹಾಕಲು ಸಾಧ್ಯವಿಲ್ಲ. ಅದು ಹೇಗೆ ಹರಿಯುತ್ತದೆ ಎಂಬ ಅರಿವು ಕೂಡ ಇಲ್ಲ. ಶಿರಾ ಕೆರೆ ಪೈಪ್ ಲೈನ್ ಮೂಲಕ ಹೇಮಾವತಿ ನದಿ ನೀರು ಹರಿಯುತ್ತಿದೆ. ಮಾಜಿ ಶಾಸಕ ಸುರೇಶ್ ಗೌಡ ಒಂದು ರೀತಿ ಬಾಯಿಬಡುಕ. ಹೀಗೆ ಸುಳ್ಳು ಮಾಹಿತಿಗಳನ್ನು ನೀಡುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಣ್ಣ ಕೈಗಾರಿಕೆ ಸಚಿವ ಶ್ರೀನಿವಾಸ್ ಹೇಳಿದರು.
ತುಮಕೂರು ನಗರದ ಹೊರವಲಯದ ಅರಳಿ ಮರದ ಪಾಳ್ಯದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಗೊಲ್ಲ ಸಮುದಾಯದ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಪ್ಪಗೆ ಎಂದೂ ಮೋಸ ಮಾಡಿಲ್ಲ ಎಂದರು.
ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೃಷ್ಣಪ್ಪ ಗೊಲ್ಲ ಸಮುದಾಯದ ವ್ಯಕ್ತಿ ಆಗಿದ್ದರಿಂದ ಒಕ್ಕಲಿಗರು ಮತ ಹಾಕಿಲ್ಲ ಎಂಬ ಆರೋಪವಿತ್ತು. ಒಕ್ಕಲಿಗರು ಇರುವ ಬೂತ್ನಲ್ಲಿ ಒಂದೇ ಒಂದು ಮತ ಕಾಂಗ್ರೆಸ್ಗೆ ಹೆಚ್ಚು ಬಿದ್ದಿದ್ದರೆ ನಾನು ರಾಜೀನಾಮೆ ಕೊಡ್ತಿನಿ. ನಾನೇನು ಕೃಷ್ಣಪ್ಪಗೆ ಚೂರಿ ಹಾಕಿ ಸಾಯಿಸಿದ್ದೀನಾ, ನಾನು ಯಾವುದೇ ತಪ್ಪು ಮಾಡಿಲ್ಲ. ಅವರ ಸಾವಿಗೆ ಕಾರಣ ನಾನಲ್ಲ ಎಂದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಹಾಜರಿದ್ದ ಗೊಲ್ಲ ಸಮುದಾಯದ ಕಾಂಗ್ರೆಸ್ ಮುಖಂಡರು, ಮಾಜಿ ಪ್ರಧಾನಿ ದೇವೇಗೌಡರು ನಮ್ಮ ಸಮುದಾಯದ ಕೆಲವೊಂದು ಆಶ್ವಾಸನೆ ಮತ್ತು ಭರವಸೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.