ಶಿವಮೊಗ್ಗ : ನಾಳೆ ವಿಪಕ್ಷದ ನಾಯಕನಾಗಿ ಅಧಿಕಾರ ಸ್ವೀಕರಿಸುತ್ತಿರುವ ಹೆಚ್ ಸಿ ಯೋಗೀಶ್, ಮೂರು ಬಾರಿ ಸದಸ್ಯರಾಗಿ ಆಯ್ಕೆ ಮಾಡಿದ ಮತದಾರರಿಗೂ ಹಾಗೂ ಟಿಕೆಟ್ ನೀಡಿದ ಪಕ್ಷಕ್ಕೂ ಕೃತಜ್ಞತೆ ಸಲ್ಲಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದಲೂ ಆಡಳಿತ ಪಕ್ಷವಾಗಿ ಬಿಜೆಪಿ ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ವಿಫಲವಾಗಿದೆ. ವಿಪಕ್ಷವಾಗಿ ಕಾಂಗ್ರೆಸ್ ಇದರ ಬಗ್ಗೆ ಹೋರಾಟ ಹಾಗೂ ಸಭೆಯಲ್ಲೂ ಸಹ ಧ್ವನಿ ಎತ್ತಿದ್ದರೂ ಸಹ ಹಾರಿಕೆಯ ಉತ್ತರ ಸಿಗುತ್ತದೆಯೇ ಹೊರತು, ಸಮಸ್ಯೆಗಳು ಬಗೆಹರಿದಿಲ್ಲ ಎಂದು ಆರೋಪಿಸಿದರು. ಕಳೆದ ಬಾರಿ ವಿಪಕ್ಷದ ನಾಯಕನಾಗಿ ಕಾರ್ಯನಿರ್ವಹಿಸಿದ್ದ ರಮೇಶ್ ಹೆಗ್ಡೆಯವರು ಸಭೆಗಳಲ್ಲಿ ಸಮಸ್ಯೆಗಳನ್ನು ಗಮನ ಸೆಳೆದಿದ್ದರು. ಮುಂದೆ ನಾನೂ ಸಹ ವಿಪಕ್ಷ ನಾಯಕನಾಗಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮೂರು-ನಾಲ್ಕು ತಿಂಗಳಿಗೊಮ್ಮೆ ಪಾಲಿಕೆ ಸಭೆ ನಡೆಯುತ್ತಿದೆ. ಚರ್ಚೆಗಳು ಸುದೀರ್ಘವಾಗಿ ರಾತ್ರಿವರೆಗೂ ನಡೆಯುತ್ತಿವೆ. ಆದರೆ, ಸಮಸ್ಯೆಗಳಿಗೆ ಉತ್ತರ ಸಿಗುತ್ತಿಲ್ಲ ಎಂದ ಅವರು, ವಿಪಕ್ಷವಾಗಿ ಕಾಂಗ್ರೆಸ್ ಜನ ಪರ ಸೇತುವೆಯಾಗಿ ಕೆಲಸ ಮಾಡಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಬಿ ವಿ ರಮೇಶ್ ಹೆಗ್ಡೆ, ಯಮುನಾ ರಂಗೇಗೌಡ, ರೇಖಾ ರಂಗನಾಥ್, ಶಾಮೀರ್ಖಾನ್, ಮಂಜುಳಾ ಶಿವಣ್ಣ, ಮೆಹಿಕ್ ಷರೀಫ್, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಕಾಶಿ ಉಪಸ್ಥಿತರಿದ್ದರು.