ಮೈಸೂರು: ವೀಕ್ ಚೀಫ್ ಮಿನಿಸ್ಟರ್ಗೆ ಮಾತ್ರ ಸಿಡಿ ಬ್ಲ್ಯಾಕ್ಮೇಲ್ ಮಾಡ್ತಾರೆ. ಇದರ ಬಗ್ಗೆ ಸಿಎಂ ಕ್ರಿಮಿನಲ್ ಕೇಸ್ ಹಾಕಲಿ ಎಂದಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಡಿ ವಿಚಾರದಲ್ಲಿ ಸಿಎಂ ಬ್ಲ್ಯಾಕ್ಮೇಲ್ಗೆ ಒಳಗಾಗಿದ್ದರೋ ಅಥವಾ ಒತ್ತಡಕ್ಕೆ ಒಳಗಾಗಿದ್ದರೋ ನನಗೆ ಗೊತ್ತಿಲ್ಲ. ಎಲ್ಲಾ ಮುಖ್ಯಮಂತ್ರಿಗಳನ್ನು ಬ್ಲ್ಯಾಕ್ಮೇಲ್ ಮಾಡಲು ಆಗುವುದಿಲ್ಲ. ವೀಕ್ ಇದ್ದವರಿಗೆ ಈ ರೀತಿ ಮಾಡ್ತಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಕ್ರಿಮಿನಲ್ ಕೇಸ್ ಹಾಕಲಿ. ಇದನ್ನ ಆ ಪಕ್ಷದವರೇ ಸಿಡಿ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಇದನ್ನ ಪ್ರತಿಪಕ್ಷದವರು ಮಾಡುತ್ತಿಲ್ಲ. ಸಿಡಿ ಬಗ್ಗೆ ಸತ್ಯಾಂಶ ಹೊರಬರಲು ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ಸಿಎಂ ಕುಟುಂಬ ರಾಜಕಾರಣದ ಬಗ್ಗೆ ಬಹಳ ಹಿಂದೆಯೇ ನಾನು ಹೇಳಿದ್ದೆ. ಬಿಡಿಎ ಹಗರಣದಲ್ಲಿ 7 ಕೋಟಿ 40 ಲಕ್ಷ ರೂ. ಸಿಎಂ ಕುಟುಂಬದ ಖಾತೆಗೆ ಹೋಗಿದೆ. ಅದರರ್ಥ ಕುಟುಂಬ ರಾಜಕಾರಣ ಇದೆ ಅಂತ ಅಲ್ವಾ?. ಈ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ. ಅವರೇ ಉತ್ತರ ಕೊಡ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ರು.
ಸಿಎಂ ಬದಲಾವಣೆಗೆ ಸಿದ್ದರಾಮಯ್ಯ ದಿನಾಂಕ ನಿಗದಿ ಮಾಡಲಿ ಎಂಬ ಬಿಎಸ್ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಷ್ಟು ದಿನಗಳ ಕಾಲ ಮಂತ್ರಿಮಂಡಲ ವಿಸ್ತರಣೆ ಯಾಕೆ ಮಾಡಿರಲಿಲ್ಲ. ಮಂತ್ರಿಮಂಡಲ ವಿಸ್ತರಣೆಗೆ ಯಾಕೆ ತಡವಾಯಿತು. ಗೋಗರೆದು, ಕೈಕಾಲು ಹಿಡಿದು ಮಂತ್ರಿಮಂಡಲ ವಿಸ್ತರಣೆ ಮಾಡಿಸಿಕೊಂಡಿರೋದು ಎಂದು ಕುಟುಕಿದರು.
ಓದಿ: ಸಿಡಿ ಬಿಡುಗಡೆ ಆಗುತ್ತೆ, ಸತ್ಯಾಂಶ ಬಯಲಾಗುತ್ತದೆ: ಬಿಎಸ್ವೈ ವಿರುದ್ಧ ಗುಡುಗಿದ ’ಹಳ್ಳಿಹಕ್ಕಿ’
ವಿಶ್ವನಾಥ್ ಪಾಪ ಬಾಯಿ ಬಡ್ಕೋತ್ತಿದ್ದಾನೆ: ಸಚಿವ ಸಂಪುಟ ವಿಸ್ತರಣೆಯಾದ ಮೇಲೆ ಹೆಚ್ ವಿಶ್ವನಾಥ್ ಪಾಪ ಬಾಯಿ ಬಡ್ಕೋತ್ತಿದ್ದಾನೆ. ಒಬ್ಬ ಮಿನಿಸ್ಟರ್ರನ್ನು ಸಂಪುಟದಿಂದ ಕೈ ಬಿಟ್ಟಿದ್ದಾರೆ. ಯಾವ ಕಾರಣಕ್ಕೆ ಬಿಟ್ಟಿದ್ದಾರೆ ಎಂದು ಕಾರಣ ಕೊಟ್ಟಿಲ್ಲ. ಪಕ್ಷೇತರನಾಗಿ ಕಾಂಗ್ರೆಸ್ ಪಕ್ಷದ ಸಹಾಯದೊಂದಿಗೆ ಗೆದ್ದಿದ್ದ ಪಕ್ಷೇತರ ಶಾಸಕ ನಾಗೇಶ್ರನ್ನು ಕೈಬಿಟ್ಟಿದ್ದಾರೆ. ಅವರನ್ನ ಯಾವ ಕಾರಣಕ್ಕೆ ಡ್ರಾಪ್ ಮಾಡಿದ್ದಾರೆ ಎಂದು ಹೇಳಿಲ್ಲ. ಇವರೆಲ್ಲ ಆಪರೇಷನ್ ಕಮಲಕ್ಕೆ ಒಳಗಾದವರು. ಕಾನೂನು ತೊಡಕಾಗಿದೆ ಎಂದು ಮುನಿರತ್ನರನ್ನು ಕೈ ಬಿಟ್ಟಿದ್ದಾರೆ. ಕಾನೂನು ತೊಡಕಿದೆ ಎಂದು ಗೊತ್ತಿದ್ದರೂ ಯಾಕೆ ಬಿಜೆಪಿಗೆ ಕರೆದುಕೊಂಡರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.