ಮೈಸೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಸೋತಿದ್ದು, ಬಹಳ ಬೇಸರವಾಯಿತು ಎಂದು ಪಿರಿಯಾಪಟ್ಟಣ ತಾಲೂಕಿನ ಮಾಜಿ ಶಾಸಕ ಕೆ. ವೆಂಕಟೇಶ್ ಸಿದ್ದರಾಮಯ್ಯ ಅವರ ಮಾತಿಗೆ ಧ್ವನಿಗೂಡಿಸಿದರು.
ಮೈಸೂರಿನ ಖಾಸಗಿ ಕಲ್ಯಾಣಮಂಟಪದ ಆವರಣದಲ್ಲಿ ಏರ್ಪಡಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮ ಜನಾಧಿಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಮಾತ್ರ ಹೊಂದಾಣಿಕೆ ರಾಜಕೀಯ ನಡೆಯಿತು.ಇದರಿಂದ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ನ ಪ್ರಮುಖ ನಾಯಕರು ಸೋತರು ಎಂದು ಬೇಸರ ಹೊರಹಾಕಿದರು.
ಇದನ್ನೂ ಓದಿ: ಬಾದಾಮಿಯಲ್ಲಿ ಸೋತಿದ್ದರೆ ನನ್ನ ರಾಜಕೀಯ ಭವಿಷ್ಯವೇ ಮಂಕಾಗುತ್ತಿತ್ತು: ಸಿದ್ದರಾಮಯ್ಯ
ಮೈತ್ರಿ ಸರ್ಕಾರವನ್ನ ರಕ್ಷಣೆ ಮಾಡಲು ಹೈಕಮಾಂಡ್ ಸೂಚನೆಯನ್ನು ಸಿದ್ದರಾಮಯ್ಯ ಪಾಲಿಸಿದರು. ಆದರೆ ಅಪ್ಪ-ಮಕ್ಕಳು ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದರು. ಅನುಕೂಲಕ್ಕೆ ತಕ್ಕಂತೆ ಜೆಡಿಎಸ್ ಪಕ್ಷದವರು ನಡೆದುಕೊಳ್ಳುತ್ತಾರೆ ಎಂದು ಕುಟುಕಿದರು. ಜಾತ್ಯತೀತ ಪಕ್ಷ ಅಂತ ಹೇಳ್ತಾರೆ, ಆದರೆ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಜೆಡಿಎಸ್ ಪಕ್ಷಕ್ಕೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ. ಜೆಡಿಎಸ್ನಿಂದ ಕಾಂಗ್ರೆಸ್ಗೆ ಬರಲು ಕೆಲವರು ಸಿದ್ಧರಿದ್ದಾರೆ. ಜೆಡಿಎಸ್ನ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ನಾನು ಪಕ್ಷದಲ್ಲಿ ಇರುವುದಿಲ್ಲ ಎನ್ನುತ್ತಾರೆ. ಜಿ.ಟಿ.ದೇವೇಗೌಡವರಿಗೆ ಪಕ್ಷ ಹಾಗೂ ಜನರ ಮೇಲೆ ನಿಷ್ಠೆ ಇಲ್ಲ. ಅವರಿಗೆ ಅಧಿಕಾರ ಬೇಕು ಎಂದರು.
ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕಾರ್ಯಕರ್ತರು ಇದರ ಬಗ್ಗೆ ಯೋಚಿಸಬೇಡಿ ಎಂದು ಸಿದ್ದರಾಮಯ್ಯ ಅವರ ಸ್ಪರ್ಧೆಗೆ ವೆಂಕಟೇಶ್ ಅವರು ವೇದಿಕೆ ಹಾಕಿದರು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಮಾತನಾಡಿ, ಸಿದ್ದರಾಮಯ್ಯ ಅವರು ರಾಜ್ಯದ ಎರಡನೇ ದೇವರಾಜ ಅರಸು ಇದ್ದಂತೆ. ಭಾಗ್ಯಗಳ ಸರದಾರ ಯೋಜನೆಗಳ ಶಕ್ತಿ ಮೂಲಕ ಮತ ಕೇಳೋಣ ಎಂದರು.