ಮಂಗಳೂರು: ಪುತ್ತೂರಿನಲ್ಲಿ ನಡೆದ ದಲಿತ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿಚಾರವಾದಿ ಪ್ರೊ.ನರೇಂದ್ರ ನಾಯಕ್, ಮಹಿಳೆಯರ ಮೇಲೆ ಅತ್ಯಾಚಾರ ಮಾಡುವವರು ಹಾಗೂ ಮಾದಕ ದ್ರವ್ಯ ಮಾಫಿಯಾದ ದುಶ್ಯಾಸನ ಕೀಚಕರು ಪಿತೃಪ್ರಧಾನವಾದ ಸಾಮಾಜಿಕ ವ್ಯವಸ್ಥೆಯ ಕೂಸುಗಳು. ಇದು ಬದಲಾದರೆ ಮಾತ್ರ ಸಮಾಜ ಬದಲಾವಣೆಯಾಗುತ್ತದೆ. ಸಮಾನತೆ ಬರಬೇಕಾದರೆ ಎಲ್ಲರೂ ಪರರನ್ನು ಗೌರವಿಸಲು ಕಲಿಯಬೇಕು. ಆಗ ಮಾತ್ರ ಗೌರವ ಬರಲು ಸಾಧ್ಯ. ನಾಳೆ ಈ ಅತ್ಯಾಚಾರ ಪ್ರಕರಣ ನಮ್ಮ ಮನೆಯಲ್ಲಿ ಆಗುವ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಪುತ್ತೂರಿನಲ್ಲಿ ವಿದ್ಯಾರ್ಥಿನಿಯನ್ನು ಅದೇ ಕಾಲೇಜಿನ ಐವರು ವಿದ್ಯಾರ್ಥಿಗಳು ಅತ್ಯಾಚಾರ ಮಾಡಿದ ವಿಡಿಯೋವನ್ನು ವೈರಲ್ ಮಾಡಿದ್ದರು. ಆದರೆ ಪ್ರಕರಣ ಆದ ಕೂಡಲೇ ಮಹಾಸಂಸ್ಕಾರಿ ವಿದ್ಯಾರ್ಥಿ ಸಂಘಟನೆಯೊಂದು ಇದನ್ನು ಮಾಡಿದವರು ನಮ್ಮ ಸದಸ್ಯರಲ್ಲ ಎಂದು ಡಿಎಸ್ಪಿಗೆ ಪತ್ರ ಬರೆಯಿತು. ಬೇರೆ ಯಾವ ಸಂಘಟನೆಗಳು ಈ ರೀತಿ ಯಾರೂ ಪತ್ರ ಬರೆದಿಲ್ಲ. ಆದರೆ ಎಬಿವಿಪಿಯವರು ಏಕೆ ಪತ್ರ ಬರೆದರು ಎಂದು ಪ್ರಶ್ನಿಸಿದರು.
ಐದು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಸೌಜನ್ಯಾ ಎಂಬ ವಿದ್ಯಾರ್ಥಿನಿಯನ್ನು ಹಾಡಹಗಲೇ ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಯಿತು. ಆಗ ಬಿಜೆಪಿಗರು ಚಕಾರ ಎತ್ತಿಲ್ಲ. ಆದರೆ, ರಕ್ಷಕರು ಎಂದು ಹೇಳಿ ತಿರುಗಾಡುತ್ತಿದ್ದಾರೆ. ಇವರ ದ್ವಿಮುಖ ನೀತಿಗೆ ಇನ್ನೊಂದು ಉದಾಹರಣೆ ಬಿಜೆಪಿ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣ. ಆದರೆ ಆ ಸಂದರ್ಭ ಬಿಜೆಪಿಯ ಒಂದೇ ಒಂದು ನರಪಿಳ್ಳೆ ಧ್ವನಿ ಎತ್ತಿಲ್ಲ. ಆದರೆ ಅದೇ ಕೊಲೆಯನ್ನು ಬೇರೆ ಸಮುದಾಯದವರು ಮಾಡಿದರೆ ಮಂಗಳೂರು ಹೊತ್ತಿ ಉರಿಯುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿನಾಯಕ ಬಾಳಿಗ ಬದಲಿಗೆ, ಒಂದು ದನ ಕಡಿಯುತ್ತಿದ್ದರೆ ಮಂಗಳೂರಿಗೆ ಬೆಂಕಿ ಕೊಡಲಾಗುತ್ತಿತ್ತು. ನಮ್ಮ ಸಂಸದರು ಕಿಸೆಯಲ್ಲಿ ಬೆಂಕಿಪೊಟ್ಟಣ ಹಿಡಿದು ತಿರುಗಾಡುತ್ತಿರುತ್ತಾರೆ. ಕೊಣಾಜೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಸಂಸದರು ಜಿಲ್ಲೆಗೆ ಬೆಂಕಿ ಕೊಡುವೆ ಎಂದು ಹೇಳಿದ್ದರು, ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.