ಮಂಗಳೂರು : ಅನ್ಯಧರ್ಮದ ಯುವಕ-ಯುವತಿಯ ಮದುವೆಯ ಲಗ್ನಪತ್ರಿಕೆ ಕಳೆದ ಎರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಇದೀಗ ಈ ವಿಚಾರದಲ್ಲಿ ಹಿಂದೂ ಸಂಘಟನೆಗಳ ನಾಯಕರು ಸಹ ಮಧ್ಯ ಪ್ರವೇಶಿಸಿದ್ದಾರೆ. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನೇತೃತ್ವದಲ್ಲಿ ಯುವತಿಯ ಮನೆಯವರ ಮನವೊಲಿಸಲು ಮುಂದಾಗಿದ್ದಾರೆ.
ಇಂದು ಸ್ವಾಮೀಜಿ ನೇತೃತ್ವದಲ್ಲಿ ಹಿಂದೂ ಸಂಘಟನೆಯ ಮುಖಂಡರು ಯುವತಿಯ ಮನೆಗೆ ತೆರಳಿ, ಅವರ ಮನವೊಲಿಕೆ ಯತ್ನಿಸಿದ್ದಾರೆ. ಪಾಂಡೇಶ್ವರದಲ್ಲಿರುವ ಯುವತಿಯ ಮನೆಗೆ ತೆರಳಿ, ಹೆತ್ತವರ ಬಳಿ ಮಾತನಾಡಿದ್ದಾರೆ.
ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದ ಸಂದರ್ಭ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಬಳಿಕ ಇಬ್ಬರ ಮದುವೆ ನಡೆಸಲು ತಯಾರಿ ನಡೆದಿತ್ತು. ನ.29ರಂದು ಕಣ್ಣೂರಿನ ಬೀಚ್ ರೆಸಾರ್ಟ್ವೊಂದರಲ್ಲಿ ಮದುವೆ ರಿಸೆಪ್ಶನ್ ನಡೆಯುವ ಬಗ್ಗೆ ಆಮಂತ್ರಣ ಪತ್ರಿಕೆ ವೈರಲ್ ಆಗಿತ್ತು.
ಈ ಬಗ್ಗೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಇತ್ತೀಚಿನ ಹತ್ತಾರು ಪ್ರಕರಣದಲ್ಲಿ ಯುವತಿಯರು ಪ್ರೀತಿಯ ಬಲೆಗೆ ಬಿದ್ದು, ಅನ್ಯಕೋಮಿನ ಯುವಕರನ್ನು ಮದುವೆಯಾಗಿ ಸಂಕಷ್ಟಕ್ಕೆ ಒಳಗಾಗಿದ್ದನ್ನು ವಿವರಿಸಿ ಮನವರಿಕೆ ಮಾಡಿದ್ದೇವೆ.
ಈ ಬಗ್ಗೆ ಆಕೆ ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಆದ್ದರಿಂದ ನಾವು ಈ ಮದುವೆಯನ್ನು ಸ್ವಲ್ಪ ಕಾಲದವರೆಗೆ ಮುಂದೂಡಲು ಸಲಹೆ ನೀಡಿದ್ದೇವೆ. ಆ ಬಳಿಕ ಯುವತಿ ಮನೆಯವರೊಂದಿಗೆ ಚರ್ಚಿಸಿ ನಾವು ಮುಂದಿನ ಹೆಜ್ಜೆ ಇರಿಸಲಿದ್ದೇವೆ ಎಂದರು.
ಓದಿ: ಕೊಳ್ಳೇಗಾಲ : ಸಿದ್ದೇಶ್ವರ ಬೆಟ್ಟದ ದೇವಾಲಯದ ಬಳಿ 2 ಗುಂಪುಗಳ ನಡುವೆ ಮಾರಾಮಾರಿ!