ಮಂಗಳೂರು: ದೇಶದ ಸಂವಿಧಾನಕ್ಕೆ ಮಾರಕವಾಗಿರುವ, ಅಪಾಯವನ್ನು ತಂದೊಡ್ಡುವ ಜಾತ್ಯಾತೀತ ಧೋರಣೆಗೆ ಮಾರಕವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸೋದು ಅನಿವಾರ್ಯವಾಗಿದೆ ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹೇಳಿದರು.
ಸಂವಿಧಾನ ಹೋರಾಟ ಸಮಿತಿಯ ವತಿಯಿಂದ ನಗರದ ಹೊರವಲಯದಲ್ಲಿರುವ ಕುತ್ತಾರ್ ಮದನಿನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹಮ್ಮಿಕೊಂಡ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಅಸ್ಸೋಂನಲ್ಲಿ ಎನ್ಆರ್ಸಿ ಕಾಯ್ದೆ ಜಾರಿಗೆ ಬಂದ ಬಳಿಕ ಲಕ್ಷಾಂತರ ಮಂದಿ ಈ ದೇಶದ ಪೌರರೆಂದು ಸಾಬೀತು ಮಾಡಲು ತಮ್ಮಲ್ಲಿ ದಾಖಲೆಗಳಲ್ಲಿದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇವರಲ್ಲಿ ಮುಸ್ಲಿಮರು ಮಾತ್ರವಲ್ಲ ಹಿಂದೂಗಳು, ದಲಿತರು, ಆದಿವಾಸಿಗಳು ಇದ್ದಾರೆ. ಆದರೆ ಈ ಕಾನೂನು ಹೊರಗಿನಿಂದ ಬಂದ ನುಸುಳುಕೋರರಿಗೆ ಮಾತ್ರ ಅನ್ವಯಿಸುತ್ತಿದೆ ಎಂದು ಕಾನೂನು ಜಾರಿಗೊಳಿಸುತ್ತಿರುವವರು ಸುಳ್ಳು ಹೇಳುತ್ತಿದ್ದಾರೆ. ಎನ್ ಆರ್ ಸಿ ಕಾಯ್ದೆಯ ಪರಿಣಾಮ ಇಂದು ನಮ್ಮ ದೇಶದ ಜಿಡಿಪಿ ಕುಸಿದಿದೆ ಎಂದು ತೀಸ್ತಾ ಸೆಟಲ್ವಾಡ್ ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವವರನ್ನು ದೇಶದ್ರೋಹಿಗಳಂತೆ ಬಿಂಬಿಸಲಾಗುತ್ತಿದೆ. ಅವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಇತ್ತೀಚೆಗೆ ದೆಹಲಿ ಪೊಲೀಸರು ತಾವು ನಡೆಸಿದ ದೌರ್ಜನ್ಯದ ಬಗ್ಗೆ ಆತ್ಮಚಿಂತನೆ ನಡೆಸಲಿ. ಗೃಹಮಂತ್ರಿಯವರ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ ಎಂದು ನೀವು ಸಬೂಬು ನೀಡುವುದು ಬೇಡ. ನಮ್ಮ ದೇಶ, ನಮ್ಮ ಕಾನೂನಿನ ಬಗ್ಗೆ ನಮಗೆ ಗೌರವವಿದೆ. ನೀವು ನಿಮ್ಮ ದೇಶದ್ರೋಹಿ ಕಾನೂನನ್ನು ಹಿಂಪಡೆಯಿರಿ ಎಂದು ತೀಸ್ತಾ ಸೆಟಲ್ವಾಡ್ ಕಿಡಿಕಾರಿದರು.