ಮಂಗಳೂರು: ನಗರದಲ್ಲಿ ನಡೆದ ಗೋಲಿಬಾರ್ ಘಟನೆಗೆ ಸಂಬಂಧಿಸಿದಂತೆ ಸಾಕ್ಷ್ಯ ಅಥವಾ ಹೇಳಿಕೆಯನ್ನು ನೀಡಲು ಅಂತಿಮ ಅವಕಾಶವನ್ನು ನೀಡಲಾಗಿದೆ.
ಮಂಗಳೂರಿನಲ್ಲಿ 2019 ಡಿಸೆಂಬರ್ 19 ರಂದು ಸಿಎಎ, ಎನ್ಆರ್ಸಿ ವಿರುದ್ಧ ಪ್ರತಿಭಟನೆ ವೇಳೆ ಗೋಲಿಬಾರ್ ಸಂಭವಿಸಿ ನೌಶೀನ್ ಮತ್ತು ಜಲೀಲ್ ಕುದ್ರೋಳಿ ಎಂಬ ಇಬ್ಬರು ಮೃತಪಟ್ಟಿದ್ದರು. ಈ ಬಗ್ಗೆ ಸರಕಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ಮೂಲಕ ಮ್ಯಾಜಿಸ್ಟೇರಿಯಲ್ ತನಿಖೆಗೆ ಆದೇಶಿಸಿತ್ತು. ಕೊರೊನಾ ಕಾರಣದಿಂದ ಮ್ಯಾಜಿಸ್ಟೇರಿಯಲ್ ವಿಚಾರಣೆ ಪೂರ್ಣವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಸಾಕ್ಷ್ಯ ಅಥವಾ ಹೇಳಿಕೆ ಪ್ರಕಟಿಸಲು ಅಂತಿಮ ದಿನಾಂಕ ನಿಗದಿಪಡಿಸಲಾಗಿದೆ.
ಆಗಸ್ಟ್ 11 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾಕ್ಷ್ಯ ಹೇಳಲು ಅವಕಾಶವಿದೆ. ಅಂದು ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಅಥವಾ ಘಟನೆ ಬಗ್ಗೆ ಮಾಹಿತಿಯುಳ್ಳ ಸಾರ್ವಜನಿಕರು ಸಾಕ್ಷ್ಯ ಹೇಳಬಹುದಾಗಿದೆ. ಅದರ ಬಳಿಕ ಸಾರ್ವಜನಿಕರಿಂದ ಯಾವುದೇ ಸಾಕ್ಷ್ಯ ಅಥವಾ ಹೇಳಿಕೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.