ಮಂಗಳೂರು: ಗ್ರಾಮ ಪಂಚಾಯತಿ ಚುನಾವಣೆಯ ವಿಜಯೋತ್ಸವ ಸಂದರ್ಭದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದಡಿ ಮೂವರು ಎಸ್ಡಿಪಿಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇದನ್ನು ಖಂಡಿಸಿ ಇಂದು ಎಸ್ಡಿಪಿಐ ವತಿಯಿಂದ ಎಸ್ಪಿ ಕಚೇರಿಯವರೆಗೂ ಪ್ರತಿಭಟನೆ ನಡೆಸಲಾಯಿತು.
ಎಸ್ಡಿಪಿಐ ಕಾರ್ಯಕರ್ತರ ಬಂಧನ ಖಂಡಿಸಿ ಎಸ್ಪಿ ಕಚೇರಿಯವರೆಗೂ ಚಲೋ ಪ್ರತಿಭಟನೆ ಮಧ್ಯಾಹ್ನ 2.30 ಸುಮಾರಿಗೆ ಕ್ಲಾಕ್ ಟವರ್ ಮುಂಭಾಗ ಸುಮಾರು ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ ಎಸ್ಡಿಪಿಐ ಕಾರ್ಯಕರ್ತರು, ಬಂಧಿತ ಅಮಾಯಕರನ್ನು ಬಿಡುಗಡೆ ಮಾಡಬೇಕು. ನೈಜ ಆರೋಪಿಗಳಾದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಬೇಕು ಹಾಗೂ ಕರ್ತವ್ಯಲೋಪ ಎಸಗಿರುವ ಬೆಳ್ತಂಗಡಿ ಎಸ್ಐಯನ್ನು ಅಮಾನತು ಮಾಡಬೇಕೆಂದು ಘೋಷಣೆ ಕೂಗಿದರು.
ಘೋಷಣೆ ಕೂಗುತ್ತಾ ಪ್ರತಿಭಟನಾಕಾರರು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದು, ಪೊಲೀಸರು ಬ್ಯಾರಿಕೇಡ್ ಹಾಕಿ ಅರ್ಧದಲ್ಲಿಯೇ ತಡೆದರು. ಈ ವೇಳೆ ಪ್ರತಿಭಟನಾಕಾರರು ರಸ್ತೆಯಲ್ಲಿಯೇ ಕುಳಿತು, ಸ್ಥಳಕ್ಕೆ ಐಜಿಯವರು ಬರಬೇಕೆಂದು ಒತ್ತಾಯಿಸಿದರು.
ಓದಿ: ಯತ್ನಾಳ್ಗೆ ನೀಡಿದ್ದ ಭದ್ರತೆ ವಾಪಸ್... ಬಿಎಸ್ವೈ ವಿರುದ್ಧ ಗುಡುಗಿದ ಶಾಸಕ!
ಆದರೆ, ಐಜಿಪಿ ದೇವಜ್ಯೋತಿ ರೇಯವರು ಮಂಗಳೂರಿನಲ್ಲಿ ಇರದ ಕಾರಣ, 4.45ರ ಸುಮಾರಿಗೆ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಥಳಕ್ಕಾಗಮಿಸಿ ಪ್ರತಿಭಟನಾ ನಿರತರ ಮನವಿಯನ್ನು ಐಜಿಪಿಯವರಿಗೆ ತಲುಪಿಸುವ ಭರವಸೆ ನೀಡಿದರು.