ಹುಬ್ಬಳ್ಳಿ: ರಾಜ್ಯ ಸರ್ಕಾರ ಹಾಗೂ ಅಬಕಾರಿ ಇಲಾಖೆ ಆದಾಯ ಸಂಗ್ರಹಕ್ಕಾಗಿ ಅಡ್ಡದಾರಿ ಹಿಡಿದಿರುವ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಸರ್ಕಾರವು ಅಬಕಾರಿ ಇಲಾಖೆಗೆ ಎಕ್ಸ್ಪೈರಿ ಡೇಟ್ ಮುಗಿದ (ಅವಧಿ ಮುಗಿದ) ಮದ್ಯ ಮಾರಾಟ ಮಾಡಲು ಒತ್ತಡ ಹೇರುತ್ತಿದೆ. ಆದರೆ, ಅದಕ್ಕೆ ಸನ್ನದುದಾರರು ನಕಾರ ವ್ಯಕ್ತಪಡಿಸಿದ್ದಾರೆ.
ಅವಧಿ ಮೀರಿದ ಬಿಯರ್ ದಾಸ್ತಾನು ಮಾರಾಟಕ್ಕೆ ಇಲಾಖೆಯಿಂದ ಅನುಮತಿ ನೀಡಿದೆ. ಧಾರವಾಡ ಜಿಲ್ಲೆಯಲ್ಲಿ 7,165 ಪೆಟ್ಟಿಗೆ ಬಿಯರ್ ಸಂಗ್ರಹವಿದ್ದು, ಒಂದು ಪೆಟ್ಟಿಗೆಯಲ್ಲಿ 7.8 ಲೀಟರ್ ಬಿಯರ್ ಮಾರಾಟವಾಗದೇ ಉಳಿದಿದೆ. ಅವಧಿ ಮುಗಿದ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದು ಸನ್ನದುದಾರರನ್ನು ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದು, ಒಂದು ವೇಳೆ ಆ ದಾಸ್ತಾನನ್ನು ಮಾರಾಟ ಮಾಡಿದರೆ ಮದ್ಯಪ್ರಿಯರು ತಿರುಗಿಬಿದ್ದರೆ ಹೇಗೆ ಎಂಬ ಆತಂಕ ಕಾಡುತ್ತಿದೆ.
ಲಾಕ್ಡೌನ್ನಲ್ಲಿ ಮದ್ಯ ಮಾರಾಟ ಸಂಪೂರ್ಣ ಸ್ಥಗಿತಗೊಂಡಿತ್ತು. ಅನ್ಲಾಕ್ ನಂತರ ಮದ್ಯ ಮಾರಾಟಕ್ಕೆ ಹಸಿರು ನಿಶಾನೆ ದೊರೆಯಿತು. ಆದರೆ, ಲಾಕ್ಡೌನ್ ಸಂದರ್ಭದಲ್ಲಿ ದಾಸ್ತಾನಾಗಿದ್ದ ಬಿಯರ್ ಈಗ ಎಕ್ಸ್ಪೈರಿ ದಿನಾಂಕ ಮುಗಿದಿದೆ. ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಸರ್ಕಾರ ಅವುಗಳನ್ನು ಡಿ.31ರವರೆಗೆ ಮಾರಲು ಅನುಮತಿ ನೀಡಿದೆ.
ಡಿಪೋಗಳಲ್ಲಿರುವ ಬಿಯರ್ ಅನ್ನು ರಾಸಾಯನಿಕ ಕೇಂದ್ರದ ಪ್ರಯೋಗಾಲಯಕ್ಕೆ ರವಾನಿಸಿ, ಆರೋಗ್ಯ ಇಲಾಖೆ ಅನುಮತಿ ಪಡೆದು ಮಾರಾಟಕ್ಕೆ ಅವಕಾಶ ನೀಡಬೇಕು. ಬಾರ್ಗಳಿಗೆ ಬರುವ ಗ್ರಾಹಕರಿಗೆ ಅವಧಿ ಮೀರಿದ ಬಿಯರ್ ನೀಡಿದರೇ ಗ್ರಾಹಕರ ಕೇಳುವ ಪ್ರಶ್ನೆಗಳಿಗೆ ಏನು ಉತ್ತರ ನೀಡಬೇಕು. ಆ ಬಿಯರ್ಗಳನ್ನು ಕುಡಿದಾಗ ಗ್ರಾಹಕರಿಗೆ ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದು ಸನ್ನದುದಾರರು ಸರ್ಕಾರ ಹಾಗೂ ಅಬಕಾರಿ ಇಲಾಖೆಗೆ ಮರು ಪ್ರಶ್ನೆ ಹಾಕುತ್ತಿದ್ದಾರೆ. ಕೂಡಲೇ ಇಂತಹ ಗೊಂದಲಗಳಿಗೆ ತೆರೆ ಎಳೆಯಬೇಕೆಂದು ಬಾರ್ ಮಾಲೀಕರು ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದಾರೆ.