ಧಾರವಾಡ: ಜಿಲ್ಲೆಯ ಅಳ್ನಾವರದಲ್ಲಿ ಕೋವಿಡ್ ಕೇರ್ ಆರಂಭಿಸದೇ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಶಾಸಕ ಸಿ.ಎಂ ನಿಂಬಣ್ಣವರ ಹಾಗೂ ಡಿಎಚ್ಒ ಡಾ. ಯಶವಂತ ಮದೀನಕರ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಳ್ನಾವರದಲ್ಲಿಂದು ಶಾಸಕ ನಿಂಬಣ್ಣವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜನೆ ಮಾಡಲಾಗಿತ್ತು. ಈಗಾಗಲೇ ಅಳ್ನಾವರ ತಾಲೂಕಿನಲ್ಲಿ ಸಹ ಕೊರೊನಾ ಹೆಚ್ಚಾಗುತ್ತಿದೆ. ಆ ಹಿನ್ನೆಲೆಯಲ್ಲಿ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊರೊನಾ ಎರಡನೇ ಅಲೆ ಶುರುವಾದಾಗಿನಿಂದ ಈಗ ಬಂದು ಸಭೆ ಮಾಡುತ್ತಿರುವುದಕ್ಕೆ ಶಾಸಕ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕು ಕೇಂದ್ರವಾಗಿದ್ದರೂ ಆರೋಗ್ಯ ಸೌಲಭ್ಯ ಒದಗಿಸದ್ದಕ್ಕೆ ಸಿಡಿಮಿಡಿಗೊಂಡರು.
ಅಳ್ನಾವರ ಪಟ್ಟಣ ಪಂಚಾಯತ್ ಸದಸ್ಯರು ಶಾಸಕ ನಿಂಬಣ್ಣವರ ಹಾಗೂ ಡಿಎಚ್ಒ ಮದೀನಕರ ಮೇಲೆ ಮುಗಿಬಿದ್ದರು. ಆಗ ಶೀಘ್ರವೇ ಅಳ್ನಾವರದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸುವುದಾಗಿ ಶಾಸಕ ನಿಂಬಣ್ಣವರ ಭರವಸೆ ನೀಡಿದರು.