ಹುಬ್ಬಳ್ಳಿ : ಉಚ್ಛ ನ್ಯಾಯಾಲಯವೂ ಸೇರಿ ವಿವಿಧ ಹಂತದ ಕೋರ್ಟ್ಗಳಲ್ಲಿ ಬಾಕಿ ಇರುವ 5 ರಿಂದ 10 ವರ್ಷದ ವ್ಯಾಜ್ಯಗಳನ್ನು ಆದ್ಯತೆ ಮೇರೆಗೆ ತ್ವರಿತವಾಗಿ ವಿಚಾರಣೆಗೆ ಒಳಪಡಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಹೇಳಿದರು.
ಹುಬ್ಬಳ್ಳಿಯ ನೂತನ ನ್ಯಾಯಾಲಯ ಆವರಣದಲ್ಲಿ 9.8 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಹುಬ್ಬಳ್ಳಿ ವಕೀಲರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಸಾಂಕ್ರಾಮಿಕದ ತರುವಾಯ ನ್ಯಾಯಾಲಯಗಳು ಪುನಃ ಕಾರ್ಯಾಚರಣೆ ಆರಂಭಿಸಿವೆ.
ತ್ವರಿತವಾಗಿ ನ್ಯಾಯದಾನ ನೀಡುವ ಹಿನ್ನೆಲೆ ಹಳೆಯ ವ್ಯಾಜ್ಯಗಳ ವಿಚಾರಣೆ ಪೂರ್ಣಗೊಳಿಸುವಂತೆ ನ್ಯಾಯಾಧೀಶರುಗಳಿಗೆ ಸೂಚಿಸಲಾಗಿದೆ. ಶೇ.50ರಷ್ಟು ಪ್ರಕರಣಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಾದಿ ಅಥವಾ ಪ್ರತಿವಾದಿಯಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಪ್ರಕರಣ ಇರಬಾರದು. ವ್ಯಾಜ್ಯಗಳನ್ನು ತ್ವರಿತವಾಗಿ ಪರಿಹರಿಸುವಲ್ಲಿ ವಕೀಲರ ಸಹಾಯ ಅಗತ್ಯ ಎಂದರು.
ಇದನ್ನೂ ಓದಿ: ನಾಲ್ಕೂವರೆ ಲಕ್ಷ ರೂಪಾಯಿಗೆ ಮಾರಾಟವಾದ ಶರತ್ತಿನ ಹೋರಿ..
ರಾಜ್ಯ ಸರ್ಕಾರ ನ್ಯಾಯಾಂಗ ವ್ಯವಸ್ಥೆಗೆ ಅಗತ್ಯ ಇರುವ ಮೂಲಸೌಕರ್ಯಗಳನ್ನು ಒದಗಿಸುತ್ತಿದೆ. ರಾಜ್ಯದಲ್ಲಿ ನ್ಯಾಯಾಲಯಗಳಲ್ಲಿ ಉತ್ತಮ ಸೌಲಭ್ಯಗಳಿವೆ. 35 ರಿಂದ 40 ನ್ಯಾಯಾಲಯಗಳಲ್ಲಿ ಹೆಚ್ಚಿನ ಸೌಕರ್ಯ ಒದಗಿಸುವಂತೆ ಸರ್ಕಾರಕ್ಕೆ ಕೋರಲಾಗಿದೆ. ಹುಬ್ಬಳ್ಳಿ ನ್ಯಾಯಾಲಯ ಸಂಕೀರ್ಣ ದೇಶದಲ್ಲಿ ಮಾದರಿ ಸ್ಮಾರಕವಾಗಿದೆ.
ಇದರ ಆವರಣದಲ್ಲಿ ಉತ್ತಮ ಸೌಲಭ್ಯಗಳುಳ್ಳ ವಕೀಲರ ಭವನ ನಿರ್ಮಿಸಲಾಗಿದೆ. ಇದರ ಸದುಪಯೋಗವಾಗಬೇಕು. ವಕೀಲರು ನಿರ್ಭೀತರಾಗಿ ಕಾರ್ಯನಿರ್ವಹಿಸಬೇಕು. ಸಂವಿಧಾನದ 21ನೇ ವಿಧಿಯ ಅನ್ವಯ ನಾಗರಿಕರಿಗೆ ನೀಡಿರುವ ಸ್ವಾತಂತ್ರ್ಯ ರಕ್ಷಣೆಯಲ್ಲಿ ವಕೀಲರ ಪಾತ್ರ ಮಹತ್ವವಾದದ್ದು. ಸ್ವಾತಂತ್ರ್ಯ ಹೋರಾಟ ಹಾಗೂ ದೇಶದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಕೀಲರು ಮುಖ್ಯಪಾತ್ರ ನಿಭಾಯಿಸಿದ್ದಾರೆ ಎಂದು ತಿಳಿಸಿದರು.
ಮಾಧ್ಯಮ ವಿಚಾರಣೆಗಳ ಸಂಪ್ರದಾಯಕ್ಕೆ ಪ್ರತಿಯಾಗಿ ವಕೀಲರು ಹಾಗೂ ನ್ಯಾಯಾಲಯಗಳು ತಮ್ಮ ಪಾತ್ರವನ್ನು ಗಟ್ಟಿಧ್ವನಿಯಲ್ಲಿ ಎತ್ತಿ ಹೇಳಬೇಕಾಗಿದೆ. ನ್ಯಾಯಾಲಯ ಹಾಗೂ ವಕೀಲರ ಸಂಘ ಸಹಕಾರದಿಂದ ಕರ್ತವ್ಯ ನಿರ್ವಹಿಸಿದ್ರೆ ನಾಗರಿಕರಿಗೆ ಉತ್ತಮ ನ್ಯಾಯದೊರಕಲಿದೆ ಎಂದು ಅಭಿಪ್ರಾಯಪಟ್ಟರು.