ಹುಬ್ಬಳ್ಳಿ : ನಟ ಪುನೀತ್ ರಾಜ್ಕುಮಾರ್ ಅವರ ನಿಧನದ ಬಳಿಕ ಕೆಲ ಕಿಡಿಗೇಡಿಗಳು ವ್ಯಾಯಾಮ, ಕುಸ್ತಿ, ಫಿಟ್ನೆಸ್ ಸೆಂಟರ್ ಹಾಗೂ ಜಿಮ್ಗೆ ಹೋಗುವುದಿಂದ ಹೃದಯಾಘಾತವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ.
ಸಾರ್ವಜನಿಕರು ಇದಕ್ಕೆ ಕಿವಿಗೊಡದೇ ತಜ್ಞರ ಸಲಹೆಯ ಮೇರೆಗೆ ವ್ಯಾಯಾಮವನ್ನು ವ್ಯವಸ್ಥಿತವಾಗಿ ಮಾಡಬಹುದೆಂದು ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಮತ್ತು ಚಲನಚಿತ್ರ ನಟ ಕೃಷ್ಣ ಚಿಕ್ಕತುಂಬಳ ಹೇಳಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ.ಪುನೀತ್ ರಾಜಕುಮಾರ ಅವರು ಆಕಸ್ಮಿಕ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ, ಕೆಲ ಕಿಡಗೇಡಿಗಳು ಇದನ್ನೆ ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವಿಡಿಯೋ ಮೂಲಕ ಫಿಟ್ನೆಸ್ ಕುರಿತು ಅಪನಂಬಿಕೆ ಸೃಷ್ಟಿಸುತ್ತಿದ್ದಾರೆ.
ಯುವಕರು ಹಾಗೂ ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ಈ ವಿಡಿಯೋಗಳನ್ನು ನೋಡಿ ಹೆದರುವಂತಾಗಿದೆ. ನಟ ಪುನೀತ್ ರಾಜಕುಮಾರ್ ಅವರ ಹೃದಯಾಘಾತಕ್ಕೂ ಮತ್ತು ಅವರ ಫಿಟ್ನೆಸ್, ಜಿಮ್ಗೂ ಯಾವುದೇ ಸಂಬಂಧವಿಲ್ಲ ಎಂದರು.
ಪುರಾತನ ಕಾಲದಿಂದಲೂ ನಮ್ಮ ಹಿರಿಯರು ಆರೋಗ್ಯ ಸಂಬಂಧಿ ವ್ಯಾಯಾಮ ಮಾಡುತ್ತಾ ಉತ್ತಮ ಆರೋಗ್ಯವನ್ನು ಕಂಡುಕೊಂಡಿದ್ದಾರೆ. ಆರೋಗ್ಯವೇ ಭಾಗ್ಯವಾಗಿದೆ.
ಈ ಹಿನ್ನೆಲೆ ಪ್ರತಿಯೊಬ್ಬರು ದೇಹದ ಫಿಟ್ನೆಸ್ ಕಾಯ್ದುಕೊಳ್ಳಲು ಉತ್ತಮ ಆಹಾರ ಸೇವನೆ ಜೊತೆಗೆ ತರಬೇತುದಾರರ ಮಾರ್ಗಸೂಚಿಯಂತೆ ವ್ಯಾಯಾಮ ಮಾಡಿದರೆ, ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಅವರು ತಿಳಿಸಿದರು.