ದಾವಣಗೆರೆ: ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಯಾರೂ ಕೂಡ ಸುಮ್ಮನಿರುವುದಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಲು ಬಂದರೆ ನಿಮ್ಮ ಬಂಡವಾಳ ಹೊರಗೆ ತೆಗೆಯುತ್ತೇನೆ ಎಂದು ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಹೇಳಿದ್ರು.
ಹರಿಹರದ ವಾಸವಿ ಕಲ್ಯಾಣ ಮಂಟಪದಲ್ಲಿ ತುಮಕೂರು ಸಿದ್ಧಗಂಗಾ ಶ್ರೀ ಹಾಗೂ ಪೇಜಾವರ ಶ್ರೀ ಪುಣ್ಯಸ್ಮರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಂಗವಾಗಿ ಹೆಚ್.ಶಿವಪ್ಪ ಅಭಿಮಾನಿಗಳ ಬಳಗ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ವಿಡಿಯೋ ಈಗ ವೈರಲ್ ಆಗಿದೆ. ನನ್ನನ್ನು ಮುಗಿಸಲು ಬಂದರೆ ನಾನು ನಿಮ್ಮನ್ನು ಮುಗಿಸುತ್ತೇನೆ. ನನ್ನನ್ನು ಮುಗಿಸಲು ನಿಮ್ಮಿಂದ ಸಾಧ್ಯವಿಲ್ಲ. ನಿಮ್ಮ ಬಂಡವಾಳವನ್ನು ಇಂಚಿಂಚು ಬಯಲಿಗೆಳೆಯುತ್ತೇನೆ ಎಂದರು. ಇನ್ನು ಅಲ್ಪಸ್ಪಲ್ಪ ತಿಳಿದೋರು ಕುರ್ಚಿ ಮೇಲೆ ಕೂತು ಹಗುರವಾಗಿ ಮಾತನಾಡಿದ್ರೆ ಅಂತಹ ನಾಲಿಗೆಯನ್ನು ಕಟ್ ಮಾಡೋ ಶಕ್ತಿ ನನ್ನಲ್ಲಿದೆ ಎಂದು ಗುಡುಗಿದ್ರು.
ಇತ್ತೀಚೆಗೆ ಹರಿಹರದಲ್ಲಿ ನಡೆದ ಹರ ಜಾತ್ರೆಗೆ ಶಿವಶಂಕರ್ ಅವರನ್ನು ಆಹ್ವಾನಿಸಿರಲಿಲ್ಲ. ಇದು ಚರ್ಚೆಗೆ ಕಾರಣವಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ನಿರ್ಲಕ್ಷ್ಯ ಮಾಡಿದ್ದಕ್ಕೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದೆ. ಹುಲಿ ಸುಮ್ಮನಿದೆ ಎಂದ ಮಾತ್ರಕ್ಕೆ ಅದು ಬಲಹೀನವಾಗಿದೆ ಎಂದರ್ಥವಲ್ಲ. ಮುಂದೆ ಬೇಟೆಗೆ ಸಿದ್ಧವಾಗಿದೆ ಎಂಬರ್ಥ ಎಂದು ಗುಡುಗಿದ್ದಾರೆ. ನಾನು ಯಾವುದೋ ಒಂದು ಸಮಾಜದ ನಾಯಕನಲ್ಲ, ಕಳೆದ ಚುನಾವಣೆಯಲ್ಲಿ ಸೋತಿರಬಹುದು. ಆದ್ರೆ, ರಾಜಕೀಯ ಕಾರಣದಿಂದ ಈ ಫಲಿತಾಂಶ ಬಂದಿದೆ. ನಾನು ಪಂಚಮಸಾಲಿ ಸಮಾಜದವನು. ಆದರೂ ಹರ ಜಾತ್ರೆ ವೇಳೆ ಊರಲ್ಲಿ ಇರಲಿಲ್ಲ. ಆದ್ರೆ, ನನ್ನ ಬಗ್ಗೆ ಯಾರೇ ಹಗುರವಾಗಿ ಮಾತನಾಡಿದರೂ ಸುಮ್ಮನಿರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.