ಬೆಂಗಳೂರು : ಹಂಸಲೇಖ ಏನಾದ್ರೂ ಮಹಾ ಅಪರಾಧ ಮಾಡಿದ್ರಾ? ಒಂದು ಹೇಳಿಕೆ ಕೊಟ್ರು. ಅದಕ್ಕೆ ಎಲ್ಲರೂ ತಿರುಗಿಬಿದ್ರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಂಸಲೇಖರ ಮಾತು ಅಪರಾಧವಾಗಿದ್ದರೆ ಅದು ಯಾವ ಪೆನಲ್ ಕೋಡ್ನಲ್ಲಿ ಬರುತ್ತೆ ಅಂತಾ ನನಗಂತೂ ಗೊತ್ತಿಲ್ಲಎಂದರು.
ಮತಾಂತರ ವಿರೋಧ ಮಾಡಿದ್ರೆ ಧರ್ಮ ವಿರೋಧಿ ಎಂದು ಹೇಳ್ತಾರೆ. ಹೊಸ ಮತಾಂತರ ನಿಷೇಧ ಕಾಯ್ದೆ ಅವಶ್ಯಕತೆ ಇಲ್ಲ. ಸಂವಿಧಾನದಲ್ಲಿ ಈಗಾಗಲೇ ಬಲವಂತದ ಮತಾಂತರಕ್ಕೆ ನಿಷೇಧ ಇದೆ. ಹೊಸ ಕಾನೂನು ಅವಶ್ಯಕತೆ ಇಲ್ಲ.
ಸದನದಲ್ಲಿ ನಾನು ಇದನ್ನು ಹೇಳಿದೆ. ಬಲವಂತದ ಮತಾಂತರಕ್ಕೆ ನನ್ನ ವಿರೋಧ ಇದೆ. ಬಲವಾಗಿ ಖಂಡಿಸುತ್ತೇನೆ. ಆದ್ರೆ, ಈಗ ತಂದಿರುವ ಕಾನೂನು ವಿರೋಧ ಮಾಡಿದ್ರೆ ಧರ್ಮ ವಿರೋಧಿ ಎಂದು ಹೇಳ್ತಾರೆ ಎಂದು ಅಸಮಾಧಾನ ಹೊರ ಹಾಕಿದ್ರು.
ಸಾಹಿತಿ ಎಸ್ ಜಿ ಸಿದ್ದರಾಮಯ್ಯ ಮತ್ತು ನನ್ನ ಜೀವನಕ್ಕೂ ಸಾಮ್ಯತೆ ಇದೆ. ಅವರು ಓದುವುದಕ್ಕೆ ಹೋಗುವಾಗ ವಿರೋಧ ಮಾಡಿದ್ರು. ನಾನು ಲಾ(ಕಾನೂನು ಅಧ್ಯಯನ) ಮಾಡಲು ಹೋಗುವಾಗ ನಮ್ಮ ಊರಿನ ಶಾನಭೋಗರು ಹೇಳಿದ್ರು ಅಂತಾ ನಮ್ಮ ಅಪ್ಪ ಕೃಷಿ ಮಾಡು ಅಂದ್ರು.
ಊರಿನಲ್ಲಿ ಪಂಚಾಯತ್ ಮಾಡಿಸಿ ಭಾಗ ಕೇಳಿದ ಬಳಿಕ ಲಾ ಮಾಡಿಸಿದ್ದು. ನನ್ನಲ್ಲಿ ಛಲ ಇದ್ದಿದ್ದರಿಂದ ಓದಿ ಈವರೆಗೂ ಬಂದೆ. ಇವರಿಗೆ ಗುರು ಇದ್ರು. ನನಗೆ ಯಾರು ಗುರು ಇರಲಿಲ್ಲ ಎಂದರು.
ಬಂದ್ಗೆ ಬೆಂಬಲ : ಕರ್ನಾಟಕ ಬಂದ್ಗೆ ನಮ್ಮ ನೈತಿಕ ಬೆಂಬಲ ಇದೆ. ಕರ್ನಾಟಕ ಬಾವುಟವನ್ನು ಮಹಾರಾಷ್ಟ್ರದಲ್ಲಿ ಸುಟ್ಟಿದ್ದಾರೆ. ಅಲ್ಲಿನ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ನಾವು ಸದನಸಲ್ಲಿ ನಿರ್ಣಯ ಪಾಸು ಮಾಡಿದ್ದೇವೆ. ಸರ್ಕಾರ ನಿರ್ಣಯ ಪಾಸ್ ಮಾಡಿ ಕೈಕಟ್ಟಿ ಕೂರುವುದಿಲ್ಲ.
ನಿರ್ಣಯವನ್ನ ಮಹರಾಷ್ಟ್ರ ಸರ್ಕಾರಕ್ಕೆ ಕಳುಹಿಸಿ ಪುಂಡರ ವಿರುದ್ಧ ಕ್ರಮಕ್ಕೆ ಒತ್ತಾಯಿಸಬೇಕು ಎಂದರು. ನೈಟ್ ಕರ್ಫ್ಯೂ ಜಾರಿಗೆ ಸಿದ್ಧತೆ ವಿಚಾರವಾಗಿ ಮಾತನಾಡಿ, ಒಮಿಕ್ರಾನ್ ನಿಯಂತ್ರಕ್ಕೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿ. ಇದರಲ್ಲಿ ನಮ್ಮ ಆಕ್ಷೇಪ ಏನೂ ಇಲ್ಲ ಎಂದು ಹೇಳಿದರು.
ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ : ನನ್ನ ನೇತೃತ್ವದಲ್ಲೇ ಮುಂದಿನ ಚುನಾವಣೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಇದ್ದಾರೆ. ನಾನು ಶಾಸಕಾಂಗ ಪಕ್ಷದ ನಾಯಕನಾಗಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಉಳಿದ ನಾಯಕರೂ ಇದ್ದಾರೆ. ಎಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.
ಇದನ್ನೂ ಓದಿ: ಕಲಬುರಗಿ ನಗರವನ್ನ ಬೆಚ್ಚಿಬಿಳಿಸಿದ್ದ ಖತರ್ನಾಕ್ ಸರಗಳ್ಳರ ಬಂಧನ
ಪಾದಯಾತ್ರೆ ಪೂರ್ವಸಿದ್ಧತಾ ಸಭೆಗೆ ಗೈರು ಹಾಜರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾವು ಅಧಿವೇಶನದಲ್ಲಿ ಇದ್ದೆವು. ಹಾಗಾಗಿ, ಭಾಗಿಯಾಗಲು ಸಾಧ್ಯವಾಗಿಲ್ಲ. ಜ. 2, 3ರಂದು ಸಭೆಯಲ್ಲಿ ಭಾಗಿಯಾಗುತ್ತೇನೆ ಎಂದರು.