ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವನ್ನಪ್ಪಿದ್ದಾನೆಂದು ರೋಗಿ ಕುಟುಂಬಸ್ಥರು ಆರೋಪ ಮಾಡಿ ಮೃತ ದೇಹದ ಎದುರು ಆಕ್ರೋಶ ಹೊರಹಾಕಿರುವ ಘಟನೆ ನಗರದ ಅಭಯ್ ಆಸ್ಪತ್ರೆಯಲ್ಲಿ ನಡೆದಿದೆ.
ಎಂ.ಕೃಷ್ಣ ಎಂಬುವವರಿಗೆ ಎದೆ ನೋವು ಕಾಣಿಸಿದ್ದು, ನಿನ್ನೆ ಅಭಯ್ ಆಸ್ಪತ್ರೆಗೆ ಮಧ್ಯಾಹ್ನ 12.30 ರ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ನಿನ್ನೆ ಅಭಯ್ ಆಸ್ಪತ್ರೆಯ ವೈದ್ಯರು ಸಂಜೆ 7 ಗಂಟೆ ಸುಮಾರಿಗೆ ರೋಗಿ ಮೃತ ಪಟ್ಟಿದ್ದಾರೆಂದು ಹೇಳಿದ್ದಾರೆ.
ಹೀಗಾಗಿ ಸೂಕ್ತ ಚಿಕಿತ್ಸೆ ನೀಡದೇ ಎಂ.ಕೃಷ್ಣ ಮೃತ ಪಟ್ಟಿದ್ದಾರೆ ಎಂದು ಮೃತನ ಕುಟುಂಬಸ್ಥರು ಆಕ್ರೋಶ ಹೊರಹಾಕಿ ಅಭಯ್ ಆಸ್ಪತ್ರೆ ವೈದ್ಯರ ವಿರುದ್ಧ ಜ್ನಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಜ್ಞಾನಭಾರತಿ ಪೊಲೀಸರು ಪ್ರಕರಣ ದಾಖಲು ಮಾಡಿ ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಿದ್ದು ತನಿಖೆ ಮುಂದುವರಿಸಿದ್ದಾರೆ.