ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಾಳೆ ಕಾಂಗ್ರೆಸ್ ನಾಯಕರನ್ನು ಔತಣ ಕೂಟಕ್ಕೆ ಆಹ್ವಾನಿಸಿದ್ದಾರೆ.
![Opposition leader Siddaramaiah to host lunch for Congress leaders](https://etvbharatimages.akamaized.net/etvbharat/prod-images/11121799_thumb.jpg)
ಬುಧವಾರ ಮಧ್ಯಾಹ್ನ ಒಂದು ಗಂಟೆಗೆ ಶಿವಾನಂದ ವೃತ್ತದ ಸಮೀಪದಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ಭೋಜನ ಕೂಟ ಆಯೋಜಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಐವರು ಕಾರ್ಯಾಧ್ಯಕ್ಷರು, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಮಾಜಿ ಸಚಿವರು, ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಸಂಸದರು ಹಾಗೂ ರಾಜ್ಯಸಭಾ ಸದಸ್ಯರನ್ನು ಕೂಡ ಆಹ್ವಾನಿಸಲಾಗಿದ್ದು, ಅವರು ಕೂಡ ಭಾಗಿಯಾಗಲಿದ್ದಾರೆ.
ಔತಣ ಕೂಟದಲ್ಲಿ ಮುಂಬರುವ ಮೂರು ಕ್ಷೇತ್ರಗಳ ಉಪಚುನಾವಣೆ ಸಂಬಂಧ ಕಾರ್ಯತಂತ್ರ ರೂಪಿಸುವ ಕಾರ್ಯ ಆಗಲಿದೆ. ಇದಲ್ಲದೆ, ಪಕ್ಷ ಬಲವರ್ಧನೆ ಹಾಗೂ ಪಕ್ಷದ ನಾಯಕರಲ್ಲಿ ಒಗ್ಗಟ್ಟಾಗಿ ಮುಂದಿನ ಉಪಚುನಾವಣೆಗಳು, ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಗೆಲ್ಲಲು ಸಂಕಲ್ಪ ತೊಡುವುದು ಹಾಗೂ ಸರ್ಕಾರದ ವಿರುದ್ಧ ನಡೆಯುವ ಹೋರಾಟಗಳನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ದೃಢ ನಿರ್ಧಾರ ಕೈಗೊಳ್ಳುವ ಸೂಚನೆಯನ್ನು ಸಿದ್ದರಾಮಯ್ಯ ನೀಡಲಿದ್ದಾರೆ ಎನ್ನಲಾಗ್ತಿದೆ.
ಅಧಿವೇಶನ ಬಳಿಕ ಉಪಚುನಾವಣೆ ನಡೆಯುವ ಕ್ಷೇತ್ರಗಳತ್ತ ಯಾವ ಮುಖಂಡರು ತೆರಳಬೇಕು ಹಾಗೂ ಯಾವ ದಿನಾಂಕದಂದು ಎಲ್ಲೆಲ್ಲಿ ಪ್ರಚಾರ ಕೈಗೊಳ್ಳಬೇಕು ಎಂಬ ಕುರಿತು ನಾಳೆಯೇ ನಿರ್ಧಾರವಾಗಲಿದೆ.
ಓದಿ: ಲಾಕ್ಡೌನ್ ವೇಳೆ ಸಾಲ ಮರುಪಾವತಿ ಗಡುವು: ಸುಪ್ರೀಂಕೋರ್ಟ್ನಿಂದ ಹೊರಬಿತ್ತು ಮಹತ್ವದ ತೀರ್ಪು!