ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಇಟ್ಟುಮಡುವಿನ ಬಾರ್ ಬಳಿ ನಡೆದಿದೆ.
ವೆಂಕಟೇಶ್ ಎಂಬಾತ ಕೊಲೆಗೀಡಾಗಿರುವ ಯುವಕ. ಈತ ಬಾರ್ ನಡೆಸುತ್ತಿದ್ದ ಎನ್ನಲಾಗ್ತಿದೆ. ನಿನ್ನೆ ರಾತ್ರಿ ಮೂವರು ದುಷ್ಕರ್ಮಿಗಳು ಈ ಹೋಟೆಲ್ಗೆ ಊಟಕ್ಕೆ ಬಂದಿದ್ದು, ಊಟ ಮುಗಿದ ಬಳಿಕ ಅಲ್ಲೇ ಇದ್ದ ಬಿಡಾ ಅಂಗಡಿಯವನ ಹತ್ತಿರ ಚಿಲ್ಲರೆ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ.
ಈ ವೇಳೆ ವೆಂಕಟೇಶ್ ಗಲಾಟೆ ಮಾಡಬೇಡಿ ಹೋಗಿ ಎಂದು ಮಧ್ಯೆ ಪ್ರವೇಶಿಸಿದ್ದ. ಇದರಿಂದ ಕುಪಿತರಾದ ಆರೋಪಿಗಳು ವೆಂಕಟೇಶ್ ಜೊತೆ ಗಲಾಟೆಗೆ ಇಳಿದು ನಂತರ ವೆಂಕಟೇಶ್ನನ್ನು ಅಟ್ಟಾಡಿಕೊಂಡು ರೋಡ್ನಲ್ಲಿ ಚೇರ್ನಿಂದ ಹಲ್ಲೆ ಮಾಡಿದ್ದಾರೆ. ನಂತರ ನೆಲಕ್ಕೆಬಿದ್ದ ವೆಂಕಟೇಶ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ತಕ್ಷಣ ವೆಂಕಟೇಶ್ನನ್ನು ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಇನ್ನು ಸಾವಿಗೀಡಾದ ವೆಂಕಟೇಶ್ ಮೂಲತಃ ಕುಣಿಗಲ್ ಬಳಿಯ ಮನವಳ್ಳಿ ಗ್ರಾಮದ ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ಬಾರ್ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ. ನಂತರ ತನ್ನ ಸ್ನೇಹಿತ ರವಿ ಜೊತೆ ಸೇರಿ ರಂಗನಾಥ್ ಹೆಸರಿನಲ್ಲಿ ಬಾರ್ ಆ್ಯಂಡ್ ರೆಸ್ಟೊರೆಂಟ್ ಆರಂಭಿಸಿದ್ದ.
ಇನ್ನು ಈ ಕುರಿತಂತೆ ಸ್ಥಳಕ್ಕೆ ಸಿಕೆ ಅಚ್ಚುಕಟ್ಟು ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.