ಬೆಂಗಳೂರು: ಸಂವಿಧಾನವನ್ನು ತೆಗೆದುಹಾಕುವುದಕ್ಕೆ ಆರ್ ಎಸ್ ಎಸ್ ಪ್ಲಾನ್ ಮಾಡಿಕೊಂಡಿದೆ. ಇದನ್ನು ವಿಫಲಗೊಳಿಸಿ, ಸಂವಿಧಾನವನ್ನು ಬಚಾವ್ ಮಾಡುವುದು ನಮ್ಮ ಮುಂದಿರುವ ದೊಡ್ಡ ಸವಾಲು ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಧರ್ಮದ ರಾಜಕೀಯದಲ್ಲಿ ಸಂವಿಧಾನವನ್ನ ತೆಗೆಯಬೇಕು. ಬಡವರಿಗೆ, ದಲಿತರಿಗೆ ರಕ್ಷಣೆ ಸಿಗುತ್ತಿದ್ದ ಈ ಸಂವಿಧಾನವನ್ನು ತೆಗೆಯಬೇಕು ಎಂದು ಆರ್ ಎಸ್ ಎಸ್ ಪ್ಲಾನ್ ಮಾಡಿಕೊಂಡಿದೆ. ಸಂವಿಧಾನದ ರಕ್ಷಣೆಗೆ ನಾವುಗಳು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಇದಕ್ಕೆ ಎಲ್ಲಾ ಎನ್ಜಿಒಗಳು, ಸಂಘಟನೆಗಳು ಒಂದಾಗಬೇಕು. ಸಿಎಎ, ಎನ್ ಆರ್ ಸಿ ಮೂಲಕ ಸಮಾಜವನ್ನು ವಿಭಜನೆ ಮಾಡುವ ಕೆಲಸ ಮಾಡಲಾಗುತ್ತಿದೆ.
ಬಡವರಿಗೆ, ದಲಿತರಿಗೆ , ಹಿಂದುಳಿದ ವರ್ಗಗಳ ಜನರಿಗೆ ತೊಂದರೆ ಕೊಡಬೇಕು ಅಂತ ಸಿಎಎ ಜಾರಿಗೆ ತರಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ, ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗಿದೆ. ಮೋದಿ ಅವರು ಉದ್ಯೋಗ ಕೊಡುತ್ತೇನೆ ಎಂದು ಹೇಳಿದ್ದರು. ಆದ್ರೆ ಜಿಡಿಪಿ ಕುಸಿದಿದೆ. ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದರು.