ಬೆಂಗಳೂರು: ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಇಂದು ಸಭೆ ನಡೆಸಲಾಯಿತು.
ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವ ಪ್ರಿಯಾಂಕ್ ಖರ್ಗೆ, ಪಿ.ಟಿ.ಪರಮೇಶ್ವರ್ ನಾಯಕ್, ಶಾಸಕ ಅಜಯ್ ಸಿಂಗ್, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ವಿಜಯ್ ಸಿಂಗ್ , ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ವಿಆರ್ ಸುದರ್ಶನ್ ಸೇರಿದಂತೆ ಇನ್ನಿತರ ನಾಯಕರು ಭಾಗಿಯಾಗಿದ್ದರು.
ಸಭೆಯಲ್ಲಿ ಚಿಂಚೊಳ್ಳಿ ಹಾಗೂ ಕುಂದಗೋಳ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಸುದೀರ್ಘ ಚರ್ಚೆ :
ಸಭೆಯ ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಮತನಾಡಿ, ರಾಜ್ಯದಲ್ಲಿ ನಡೆಯಲಿರುವ ಬೈ ಎಲೆಕ್ಷನ್ ಹಿನ್ನೆಲೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಕುರಿತು ಎರಡು ಜಿಲ್ಲೆಗಳ ನಾಯಕರ ಜೊತೆ ಚರ್ಚೆ ಮಾಡಿದ್ದೇವೆ. ನಾಳೆ ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಸಪೋರ್ಟ್ ಕೇಳ್ತೇವೆ. ಅವರ ಬೆಂಬಲ ಸಹ ನಮಗಿರುತ್ತೆ. ನಾವು ಕೂಡ ಜೆಡಿಎಸ್ ಮುಖಂಡರೊಂದಿಗೆ ಚರ್ಚೆ ಮಾಡ್ತೇವೆ. ಈಗಾಗಲೇ ದೇವೇಗೌಡರು ಕೂಡ ನಾವು ಎರಡು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿ ಹಾಕಲ್ಲ ಅಂದಿದ್ದಾರೆ ಎಂದರು.
ರಮೇಶ್ಗೆ ಮೋಸ ಮಾಡಿಲ್ಲ:
ರಮೇಶ ಜಾರಕಿಹೊಳಿಗೆ ಕಾಂಗ್ರೆಸ್ ಯಾವತ್ತೂ ಮೋಸ ಮಾಡಿಲ್ಲ. ಅವರು ಬಿಜೆಪಿಯವರ ಮಾತು ಕೇಳಿ ತಪ್ಪು ನಿರ್ಧಾರ ತೆಗೆದುಕೊಳ್ಳೋದು ಬೇಡ. ಬೇರೆ ಯಾವುದೋ ನೋವಿನಿಂದ ಈ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ರಮೇಶ ಜಾರಕಿಹೊಳಿ ರಕ್ತ, ಡಿಎನ್ಎ ಕಾಂಗ್ರೆಸ್ ಪಕ್ಷವೇ ಆಗಿದೆ. ಅವರು ಕಾಂಗ್ರೆಸ್ ತೊರೆದು ತಪ್ಪು ಮಾಡೋದು ಬೇಡ ಎಂದು ಕಿವಿಮಾತು ಹೇಳಿದರು.
ಪಕ್ಷದಿಂದ ರಮೇಶ್ ಜಾರಕಿಹೊಳಿಗೆ ಯಾವುದ ನೋವು ಕೊಟ್ಟಿಲ್ಲ. ಅವರನ್ನು ಉತ್ತಮವಾಗಿಯೇ ನಡೆಸಿಕೊಂಡಿದ್ದೇವೆ. ಅವರು ವೈಯುಕ್ತಿಕ ಕಾರಣಕ್ಕಷ್ಟೇ ಈ ನಿರ್ಧಾರ ತೆಗೆದುಕೊಂಡಿರಬಹುದು. ಆದರೆ ಅವರು ಬಿಜೆಪಿಯವರ ಕುಮ್ಮಕ್ಕಿಗೆ ಒಳಗಾದರೆ ಕಷ್ಟ. ಲೋಕಸಭೆ ಫಲಿತಾಂಶದ ಬಳಿಕ ಎಲ್ಲದಕ್ಕೂ ಇತಿಶ್ರೀ ಬೀಳುತ್ತೆ. . ಕುದುರೆ ವ್ಯಾಪಾರಕ್ಕೂ ಕೊನೆ ಬೀಳುತ್ತೆ. ಬಿಜೆಪಿ ಕೀಳುಮಟ್ಟದ ರಾಜಕಾರಣಕ್ಕೆ ಮೇ.23 ರಂದು ಉತ್ತರ ಸಿಗಲಿದೆ ಎಂದರು.
ಉಮೇಶ್ ಜಾದವ್ ವಿರುದ್ದ ಕಿಡಿ:
ಉಮೇಶ್ ಜಾದವ್ ಸಂಸತ್ ಚುನಾವಣೆಯಲ್ಲೂ ಸೋಲ್ತಾರೆ. ಜನರೇ ಅವರನ್ನು ಕ್ಷೇತ್ರದಿಂದ ಹೊರ ಹಾಕುತ್ತಾರೆ. ಉಮೇಶ್ ಜಾದವ್ ಕಾಂಗ್ರೆಸ್ ಕಾರ್ಯಕರ್ತರಿಗೆ , ಅಲ್ಲಿಯ ಜನಕ್ಕೆ ದ್ರೋಹ ಮಾಡಿದ್ದಾರೆ. ಚುನಾವಣೆ ಮುಗಿದ ಬಳಿಕ ಉಮೇಶ್ ಜಾದವ್ ಚಿಂಚೋಳಿಯಲ್ಲಿ ಉಳಿಯೋಕಾಗಲ್ಲ ಎಂದು ಕಿಡಿಕಾರಿದರು.