ಬೆಂಗಳೂರು : ಚಿತ್ರರಂಗದ ಪ್ರತಿಭಾವಂತ ನಟ, ಬಹುಮುಖ ಪ್ರತಿಭೆ, ತಮ್ಮ ಇಡೀ ಬದುಕನ್ನು ಕನ್ನಡ ಸಿನಿಮಾಕ್ಕೆ ಮೀಸಲಿಟ್ಟು, ಈಚೆಗೆ ನಮ್ಮನ್ನು ಅಗಲಿದ ಪುನೀತ್ ರಾಜಕುಮಾರ್ (Puneeth Rajkumar) ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' (Karnataka Ratna) ಪ್ರಶಸ್ತಿ ಘೋಷಣೆ ಮಾಡಿರುವುದು ಅರ್ಥಪೂರ್ಣ ಹಾಗೂ ನಿಜವಾದ ಗೌರವ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಾನು ಈ ಮೊದಲೇ ಹೇಳಿದಂತೆ "ಭೂಮಂಡಲ ಇರುವಷ್ಟು ದಿನ ಕನ್ನಡವಿರುತ್ತದೆ. ಕನ್ನಡ ಇರುವಷ್ಟು ದಿನ ಅಪ್ಪು ಇರುತ್ತಾರೆ. ಅವರ ಸ್ಫೂರ್ತಿ ಎಂದೆಂದಿಗೂ ನಮ್ಮೊಂದಿಗೆ ಇರುತ್ತದೆ" ಎಂದಿದ್ದಾರೆ.
ನಳಿನ್ಕುಮಾರ್ ಕಟೀಲ್ ಅಭಿನಂದನೆ:
ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲು ಮುಂದಾದ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಶ್ಲಾಘಿಸಿದ್ದಾರೆ. ಬಾಲ್ಯದಲ್ಲಿಯೇ ಪ್ರತಿಭೆಯ ಚಿಲುಮೆ ಎನಿಸಿದ್ದ ಪುನೀತ್ ಅವರು, ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿದ್ದರು. ಕೇವಲ ಸಿನಿಮಾ ಕ್ಷೇತ್ರಕ್ಕೆ ತಮ್ಮನ್ನು ಸೀಮಿತಗೊಳಿಸದ ಪುನೀತ್ ಅವರು ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ನೆನಪಿಸಿದ್ದಾರೆ.