ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಾಜಿ ಸಚಿವ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ನೀಡಲು ಲಾಬಿ ಮಾಡಿದವರು ಯಾರು? ಮುಖ್ಯಮಂತ್ರಿ ಯಡಿಯೂರಪ್ಪನವರಾ? ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರಾ? ಅಥವಾ ಹೈಕಮಾಂಡಾ? ಎನ್ನುವ ಜಿಜ್ಞಾಸೆ ಬಿಜೆಪಿಯವರಲ್ಲಿ ಮೂಡಿದೆ.
ಶಾಸಕರಲ್ಲದಿದ್ದರೂ ಅಚ್ಚರಿ ಎಂಬಂತೆ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಲಕ್ಷ್ಮಣ್ ಸವದಿ ವಾಸ್ತವವಾಗಿ ಸಿಎಂ ಯಡಿಯೂರಪ್ಪ ಬೆಂಬಲಿಗರು. ಆದರೆ ಸಚಿವ ಸ್ಥಾನಕ್ಕೆ ಪ್ರಬಲ ಪೈಪೋಟಿ ಇದ್ದುದರಿಂದ ಶಾಸಕರಿಗೇ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲದಿರುವಾಗ ಶಾಸಕರಲ್ಲದವರಿಗೆ ಅದರಲ್ಲೂ ಚುನಾವಣೆಯಲ್ಲಿ ಸೋತ ಸವದಿಗೆ ಸಿಎಂ, ಸಚಿವ ಸ್ಥಾನಕ್ಕೆ ಶಿಫಾರಸು ಮಾಡಲು ಸಾಧ್ಯವಿಲ್ಲವೆಂದು ಹೇಳಲಾಗುತ್ತಿದೆ.
ಸಚಿವ ಲಕ್ಷ್ಮಣ್ ಸವದಿಗೆ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಪ್ರತಿನಿಧಿಸುವ ಅಥಣಿ ಕ್ಷೇತ್ರದಲ್ಲಿ ಟಿಕೆಟ್ ನೀಡಿ ಉಪ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರಲು ಯಡಿಯೂರಪ್ಪನವರು ನಿರ್ಧರಿಸಿದ್ದರು. ಆದ್ರೆ ಚುನಾವಣೆಗೂ ಮುನ್ನವೇ ಅವರನ್ನು ಸಚಿವರನ್ನಾಗಿ ನೇಮಕ ಮಾಡುವ ಉದ್ದೇಶ ಇರಲಿಲ್ಲ ಎಂಬುದು ಮುಖ್ಯಮಂತ್ರಿ ಅವರ ಬೆಂಬಲಿಗರ ಮಾತು.
ಸಂತೋಷ್ ಕೈವಾಡವೇ...?
ರಾಜ್ಯ ಬಿಜೆಪಿಯಲ್ಲಿ ಈಗ ಎರಡು ಬಣಗಳಿವೆ. ಒಂದು ಸಿಎಂ ಯಡಿಯೂರಪ್ಪ ಗುಂಪು ಮತ್ತೊಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಗುಂಪು. ಮೊದಲಿನಿಂದಲೂ ಇಬ್ಬರಿಗೂ ಆಂತರಿಕವಾಗಿ ರಾಜಕೀಯ ವೈಮನಸ್ಸುಗಳಿದ್ದು, ಅವಕಾಶ ಸಿಕ್ಕಾಗ ಒಬ್ಬರ ವಿರುದ್ಧ ಮತ್ತೊಬ್ಬರು ತಂತ್ರ- ಪ್ರತಿ ತಂತ್ರಗಳನ್ನು ಹೆಣೆಯುತ್ತಲೇ ಇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತವೆ.
ಸಚಿವ ಸಂಪುಟ ವಿಸ್ತರಣೆಯಲ್ಲೂ ಅಷ್ಟೇ, ಇಬ್ಬರೂ ಸಹ ತಮಗೆ ಬೇಕಾದವರಿಗೆ ಸಚಿವರನ್ನಾಗಿ ಮಾಡಲು ಹರಸಾಸಹಸ ಪಟ್ಟಿದ್ದಾರೆ. ಸವದಿ ವಿಚಾರದಲ್ಲಿಯೂ ಇದೇ ಆಗಿದೆ. ಸಿಎಂ ಯಡಿಯೂರಪ್ಪನವರು ತಮಗೆ ಸವದಿ ಆಪ್ತರಾದರೂ ಸಚಿವರನ್ನಾಗಿ ಮಾಡಲು ಹೈಕಮಾಂಡ್ಗೆ ಶಿಫಾರಸ್ಸು ಮಾಡಿರಲಿಲ್ಲ. ಬದಲಿಗೆ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ಅವರನ್ನು ಸಚಿವರನ್ನಾಗಿ ಮಾಡಲು ಆಸಕ್ತಿ ಹೊಂದಿದ್ದರು. ಸಂತೋಷ್ ಅವರು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಲಕ್ಷ್ಮಣ್ ಸವದಿ ಅವರನ್ನು ಸಚಿವರನ್ನಾಗಿ ಮಾಡಲು ಹೈಕಮಾಂಡ್ ಬಳಿ ಪಟ್ಟು ಹಿಡಿದರೆಂದು ಹೇಳಲಾಗ್ತಿದೆ. ಉಮೇಶ್ ಕತ್ತಿ ಬದಲಿಗೆ ಸವದಿಯನ್ನು ಸಚಿವರನ್ನಾಗಿ ನೇಮಿಸಿದರೆ ಅಥಣಿ ಹಾಗೂ ಕಾಗವಾಡ ಕ್ಷೇತ್ರ ಗೆಲ್ಲಲು ಸಹಾಯಕವಾಗುತ್ತದೆ ಎಂದು ಸವದಿಗೆ ಸಚಿವಗಿರಿ ನೀಡಲಾಗಿದೆ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆ. ಆದರೆ ಒಳಮರ್ಮವೇ ಬೇರೆಯದೇ ಇದೇ ಎನ್ನಲಾಗುತ್ತದೆ.
ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ್ದರಿಂದ ಹಿರಿಯ ಶಾಸಕರಾದ ಉಮೇಶ್ ಕತ್ತಿ ಮತ್ತು ಬಾಲಚಂದ್ರ ಜಾರಕಿಹೊಳಿ, ಮುಖ್ಯಮಂತ್ರಿ ವಿರುದ್ಧ ಅಸಮಾಧಾನಗೊಳ್ಳುತ್ತಾರೆ. ಆಗ ರಾಜ್ಯ ರಾಜಕಾರಣದಲ್ಲಿ ಸಿಎಂಗಿಂತ ತಮ್ಮ ಹಿಡಿತವೇ ಹೆಚ್ಚಾಗಿದೆ ಎನ್ನುವ ಸಂದೇಶವನ್ನು ಎಲ್ಲರಿಗೂ ರವಾನಿಸಿದಂತಾಗುತ್ತದೆ ಎನ್ನುವುದು ಸಂತೋಷ್ ಅವರ ಲೆಕ್ಕಾಚಾರ ಇರಬಹುದೆಂದು ಹೇಳಲಾಗುತ್ತಿದೆ.