ಬೆಂಗಳೂರು: ರಾಜ್ಯದಲ್ಲಿ ಕನ್ನಡ ಕಡಗಣನೆ ಮಾಡುವುದು ಇತ್ತೀಚೆಗೆ ಹೆಚ್ಚಾಗಿದೆ. ಅದರಲ್ಲೂ ಕೇಂದ್ರ ಸಚಿವರು ರಾಜ್ಯಕ್ಕೆ ಬಂದ್ರೆ ಕಾರ್ಯಕ್ರಮದಲ್ಲಿ ಕನ್ನಡವೇ ಮಾಯವಾಗುತ್ತದೆ ಎನ್ನುವ ಆರೋಪ ಕೇಳಿಬಂದಿದ್ದು ಈ ಬೆನ್ನಲ್ಲೇ ಇಂದು ಆರೋಗ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂಗ್ಲಿಷ್ ಬ್ಯಾನರ್ಗಳು ರಾರಾಜಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ರಾಜೀವ್ ಗಾಂಧಿ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಇಲಾಖೆ ಆಯೋಜಿಸಿದ್ದ ಮಾಡ್ಯೂಲರ್ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ ಎನ್ನಲಾಗಿದೆ. ವೇದಿಕೆಯ ಬ್ಯಾನರ್ ಹಾಗೂ ಕೋವಿಡ್ ಆಸ್ಪತ್ರೆ ಅಡಿಗಲ್ಲಿನಲ್ಲಿ ಮಾತೃಭಾಷೆ ಬಳಸದೆ ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇಂದು ಮಾಡ್ಯೂಲರ್ ಆಸ್ಪತ್ರೆಯನ್ನು ಕೇಂದ್ರ ಸಚಿವ ಮನ್ಸೂಖ್ ಮಾಂಡವೀಯಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ಸಾಹಿ ಸಿಎಂ ಆಗಿ ಬೊಮ್ಮಾಯಿ ಕಾರ್ಯನಿರ್ವಹಿಸುತ್ತಿದ್ದು ಕೊರೊನಾ ನಿರ್ವಹಣೆ ಅಚ್ಚುಕಟ್ಟಾಗಿ ಮಾಡಿದ್ದಾರೆ. ಕರ್ನಾಟಕದಲ್ಲಿ ಮೊದಲ ಡೋಸ್ ಲಸಿಕೆ ಬಹುತೇಕ ಯಶಸ್ವಿಯಾಗಿದ್ದು, ದೇಶದಲ್ಲಿಯೇ ಲಸಿಕೆ ನೀಡುವುದರಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರತಿ ಹಳ್ಳಿ, ಮನೆ ಮನೆಗೆ ತೆರಳಿ ಲಸಿಕೆ ತಲುಪಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿ ಜಿಲ್ಲೆಯಲ್ಲೊಂದು ಮಾಡ್ಯೂಲರ್ ಆಸ್ಪತ್ರೆ ಆಗಬೇಕು. ಪ್ಯಾರಾ ಮೆಡಿಕಲ್ ಸ್ಟಾಫ್ ಸೇರಿದಂತೆ ವೈದ್ಯರ ಅವಶ್ಯಕತೆ ಇದೆ, ಈ ಕುರಿತು ಗಮನಹರಿಸಲಾಗುವುದು. ಮನುಷ್ಯನ ದೊಡ್ಡ ಗುಣ ಉಪಕಾರ ಸ್ಮರಣೆಯಾಗಿದೆ. ಹಲವು ಕಂಪನಿಗಳು ಆಸ್ಪತ್ರೆಗೆ ಸಹಾಯ ಮಾಡಿವೆ. ಆ ಕಂಪನಿಗಳಿಗೆ ಸಹಕಾರ ಕೊಡುವುದು ಸರ್ಕಾರದ ಕೆಲಸ ಎಂದರು.