ಬೆಂಗಳೂರು: ನಾನೇನು ಎಳೆ ಮಗು ಅಲ್ಲ, ನನ್ನ ಕಿವಿ ಮೇಲೆ ಹೂ ಇಡಲು ಬರಬೇಡ ಎಂದು ವಸತಿ ಸಚಿವ ವಿ. ಸೋಮಣ್ಣ ಅಧಿಕಾರಿಯೊಬ್ಬರ ಮೇಲೆ ಗರಂ ಆದ ಘಟನೆ ವಿಕಾಸಸೌಧದಲ್ಲಿ ನಡೆಯಿತು.
ಒಂದು ಲಕ್ಷ ಬಹುಮಹಡಿ ಮನೆಗಳ ಯೋಜನೆಯ ಅನುಷ್ಠಾನ ಕುರಿತಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ಸೋಮಣ್ಣ, ಅಧಿಕಾರಿಗಳಿಂದ ಯೋಜನೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಎಷ್ಟೆಷ್ಟು ಕೆಲಸ ಆಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಕೊಡಿ ಎಂದಾಗ ಹಿರಿಯ ಇಂಜಿನಿಯರ್ ಪುಸ್ತಕ ನೀಡಲು ಮುಂದಾದರು. ಇದಕ್ಕೆ ಗರಂ ಆದ ಸೋಮಣ್ಣ, ನಾನು ಬೆಂಗಳೂರಿಗೆ ಬಂದಾಗ ನೀವು ಬೆಂಗಳೂರಿಗೆ ಬಂದಿರಲಿಲ್ಲ. ನನ್ನ ಕಿವಿ ಮೇಲೆ ಹೂ ಇಡಬೇಡ. ಸರಿಯಾಗಿ ಕೆಲಸ ಮಾಡಿ. ಇಲ್ಲವೆಂದರೆ ಹೋಗಿ. ನನಗೆ ಗೊತ್ತು ಬೇರೆಯವರಿಂದ ಕೆಲಸ ಮಾಡಿಸಿಕೊಳ್ಳುವುದು ಎಂದರು.
ಜೊತೆಗೆ ಮನೆ ನಿರ್ಮಾಣ ಕೆಲಸ ಯಾವ ಹಂತದಲ್ಲಿದೆ, ವಿಳಂಬ ಏಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ವಸತಿ ಇಲಾಖೆಯ ಕಾರ್ಯದರ್ಶಿಗಳು, ರಾಜೀವ್ ಗಾಂಧಿ ವಸತಿ ನಿಗಮದ ಆಯುಕ್ತರು ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: 'ಕನ್ನಡ, ಕನ್ನಡಿಗ, ಕರ್ನಾಟಕ'ದ ವಿಚಾರ: ವಿಶೇಷ ಅಧಿವೇಶನ ಕರೆಯುವಂತೆ ಹೆಚ್ಡಿಕೆ ಪತ್ರ