ಬೆಂಗಳೂರು: ಬಿಎಂಟಿಸಿಯ 34 ಸಾವಿರ ಸಿಬ್ಬಂದಿಗೆ ಇನ್ಮುಂದೆ ಆದ್ಯತೆ ಮೇರೆಗೆ ಚಿಕಿತ್ಸೆ ಸಿಗಲಿದೆ. ನೌಕರರಿಗೆ ಆದ್ಯತೆ ಮೇರೆಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಬಿಎಂಟಿಸಿ ಅಧ್ಯಕ್ಷ ಎನ್ ಎಸ್ ನಂದೀಶ್ ರೆಡ್ಡಿ, ನಿಮ್ಮಾನ್ಸ್ ಸಂಸ್ಥೆಯೊಂದಿಗೆ 3 ವರ್ಷದ ಒಡಂಬಡಿಕೆ ಮಾಡಿಕೊಂಡಿದ್ದಾರೆ.
ಇಂದು ನಿಮಾನ್ಸ್ ಕಚೇರಿಯಲ್ಲಿ ಒಡಂಬಡಿಕೆಗೆ ಸಹಿ ಮಾಡಿ ಮಾತನಾಡಿದ ಬಿಎಂಟಿಸಿ ಅಧ್ಯಕ್ಷ ಎನ್ ಎಸ್ ನಂದೀಶ್ ರೆಡ್ಡಿ, ನಿತ್ಯ ಒತ್ತಡದಲ್ಲಿ ಚಾಲಕರು, ನಿರ್ವಾಹಕರು ಮತ್ತು ಇನ್ನಿತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಸಿಬ್ಬಂದಿ ಇನ್ಮುಂದೆ ಆಸ್ಪತ್ರೆಯನ್ನು ಹುಡುಕುವ ಪ್ರಮೇಯ ಇರುವುದಿಲ್ಲ. ಈ ನಿಟ್ಟಿನಲ್ಲಿ ನಿಮಾನ್ಸ್ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಆರೋಗ್ಯ ಸಮಸ್ಯೆ ಎದುರಾದ್ರೆ ನಿಮಾನ್ಸ್ ಆಸ್ಪತ್ರೆಯಲ್ಲಿ ಆದ್ಯತೆಯ ಮೇಲೆ ಚಿಕಿತ್ಸೆ ಸಿಗಲಿದೆ. ಇದಕ್ಕಾಗಿ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಸಿಬ್ಬಂದಿಗೆ ನಿಮಾನ್ಸ್ ಐಡಿ ಕಾರ್ಡ್ ಮಾಡಿಕೊಡುವ ಚಿಂತನೆ ನಡೆದಿದೆ. ಸಿಬ್ಬಂದಿಯ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಒಂದೆರಡು ತಿಂಗಳಲ್ಲಿ ನಿರ್ದಿಷ್ಟ ಯೋಜನೆ ಮಾಡ್ತೀವಿ. ಈ ನಿಟ್ಟಿನಲ್ಲಿ ಇಂದು ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದರು.
![ನಿಮಾನ್ಸ್ ಜೊತೆ ಬಿಎಂಟಿಸಿ ಒಪ್ಪಂದ](https://etvbharatimages.akamaized.net/etvbharat/prod-images/kn-bng-06-bmtc-nimhans-7202707_01102020232511_0110f_1601574911_445.jpg)
ನಿಮಾನ್ಸ್ ನಿರ್ದೇಶಕ ಡಾ.ಗಂಗಾಧರ್ ಮಾತನಾಡಿ, 34 ಸಾವಿರ ಸಿಬ್ಬಂದಿಗೆ ಒತ್ತಡ, ಸ್ಮೋಕ್ ಪೊಲ್ಯುಷನ್ ಉಂಟಾದ ಸಂದರ್ಭದಲ್ಲಿ ಯಾವ ರೀತಿ ಆರೋಗ್ಯ ವೃದ್ಧಿ ಮಾಡಬೇಕು ಎನ್ನುವ ಬಗ್ಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಬಿಎಂಟಿಸಿ ಸಿಬ್ಬಂದಿಗೆ ವಿಶೇಷ ಆದ್ಯತೆ ಮೇರೆಗೆ ಚಿಕಿತ್ಸೆ ಕೊಡಲಾಗುತ್ತದೆ. ಇದಕ್ಕಾಗಿ ರೂಪುರೇಷೆ ತಯಾರಿಸ್ತೀವಿ. ಬಿಎಂಟಿಸಿ ಸಿಬ್ಬಂದಿಯ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ 3 ವರ್ಷಗಳ ಎಂಒಯು ಮಾಡಿಕೊಂಡಿದ್ದೇವೆ ಎಂದರು.