ಬೆಂಗಳೂರು: ನಿನ್ನೆ ರಾತ್ರಿ ನಾಯಂಡಹಳ್ಳಿಯಲ್ಲಿ ಬಿಬಿಎಂಪಿ ಕಸದ ಲಾರಿ ಹೊಡೆದು ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಆಗಿದ್ದ ಪದ್ಮಿನಿ ಸಾವನ್ನಪ್ಪಿದ್ದಾರೆ. ಇವರಿಗೆ ಯುವನ್ ಎಂಬ ಗಂಡು ಮಗುವಿದ್ದು, ಸಣ್ಣ ವಯಸ್ಸಿನಲ್ಲೇ ತಂದೆ ತಾಯಿ ಇಬ್ಬರನ್ನೂ ಮಗು ಕಳೆದುಕೊಂಡಿದೆ. ಮೂಲತಃ ಆಂಧ್ರಪ್ರದೇಶದವರಾದ ಮೃತ ಪದ್ಮಿನಿ ಎಸ್ ಬಿಐ ಬ್ಯಾಂಕ್ ಉದ್ಯೋಗಿಯಾಗಿದ್ದು, ಕಳೆದ 2010 ರಲ್ಲಿ ಬೆಂಗಳೂರಿಗೆ ವರ್ಗಾವಣೆಯಾಗಿತ್ತು.
ಚಂದ್ರಾಲೇಔಟ್ ಎಸ್ಬಿಐ ಬ್ಯಾಂಕ್ನಲ್ಲಿ ಅಕೌಂಟೆಡ್ ಆಗಿದ್ದ ಪದ್ಮಿನಿ ತಂದೆ, ತಾಯಿ, ಹಾಗೂ ಮಗ ಯುವಾನ್ ಜೊತೆ ಬೆಂಗಳೂರಿನ ಆರ್.ಆರ್.ನಗರದಲ್ಲಿ ವಾಸವಿದ್ದರು. ಕೆಲಸ ಮುಗಿಸಿ ಮನೆಗೆ ಹೊರಟಿದ್ದಾಗ ನಾಯಂಡಹಳ್ಳಿ ಜಂಕ್ಷನ್ ಬಳಿ ಹಿಂಬದಿಯಿಂದ ಬಿಬಿಎಂಪಿ ಕಸದ ಲಾರಿ ಪದ್ಮಿನಿ ಗಾಡಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಪದ್ಮಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪದ್ಮಿನಿ ಸಾವು ಐದು ವರ್ಷದ ಪುಟಾಣಿಯನ್ನು ಅನಾಥವಾಗಿಸಿದೆ. ನತದೃಷ್ಟ ವಿಷಯ ಏನೆಂದರೆ ಮೂರು ವರ್ಷಗಳ ಹಿಂದೆಯಷ್ಟೇ ಪತಿ ಸಹ ಸಾವನ್ನಪ್ಪಿದ್ದರು. ಆರ್ಕಿಟೆಕ್ಟ್ ಆಗಿ ಕೆಲಸ ಮಾಡ್ತಿದ್ದ ಪದ್ಮಿನಿ ಕೆಲಸ ವೇಳೆ ತಲೆಗೆ ಕಲ್ಲು ಬಿದ್ದು ಒಂದು ವರ್ಷಗಳ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನಪ್ಪಿದ್ದರು. ಇದೀಗ ಮೂರು ವರ್ಷಗಳ ಬಳಿಕ ಪದ್ಮನಿಯೂ ಇಹಲೋಕ ತ್ಯಜಿಸಿದ್ದು, ಈ ನಡುವೆ ಈ ಲೋಕದ ಪರಿವೇ ಇಲ್ಲದ ಯುವಾನ್ ಎಂಬ ಪುಟ್ಟ ಕಂದಮ್ಮ ಅನಾಥವಾಗಿ ಅಜ್ಜಿಯ ಮಡಿಲಿಗೆ ಬಿದ್ದಿದೆ.
ಒಂದೇ ತಿಂಗಳಲ್ಲಿ ಮೂವರ ಬಲಿ ಪಡೆದ 'ಬಿಬಿಎಂಪಿ ಲಾರಿ': ಬಿಬಿಎಂಪಿ ಕಸದ ಲಾರಿಗೆ ಒಂದೇ ತಿಂಗಳ ಅವಧಿಯಲ್ಲಿ ಮೂರು ಜೀವಗಳು ಬಲಿಯಾಗಿದೆ. ಮಾರ್ಚ್ 21ಕ್ಕೆ ಹೆಬ್ಬಾಳದಲ್ಲಿ ಅಕ್ಷಯ, ಮಾರ್ಚ್ 30ಕ್ಕೆ ಬಾಗಲೂರು ಬಳಿ ರಾಮಯ್ಯ, ಏಪ್ರಿಲ್ 18ಕ್ಕೆ ಪದ್ಮಿನಿ. ಹೀಗೆ ಸಾಲು ಸಾಲು ಬದುಕಿಗೆ ಬಿಬಿಎಂಪಿ ಕಸದ ಲಾರಿ ಕೊಳ್ಳಿ ಇಟ್ಟಿದೆ. ಈ ಹಿನ್ನೆಲೆ ಬಿಬಿಎಂಪಿ ಚೀಫ್ ಕಮಿಷನರ್ ಗೌರವ್ ಗುಪ್ತಾ, ಪಾಲಿಕೆ ಕ್ಯಾಂಪಾಕ್ಟರ್ ವಾಹನಗಳ ಫಿಟ್ನೆಸ್ ತಪಾಸಣೆ ನಡೆಸಿ ವೇಗದ ಮಿತಿ, ಚಾಲಕರ ಕ್ಷಮತೆ ಪರಿಶೀಲನೆ ನಡೆಸಲು ಆದೇಶ ಮಾಡಿದ್ದಾರೆ.
ಬ್ಯಾಟರಾಯನಪುರ ಸಂಚಾರಿ ಪೊಲೀಸರು ಬಿಬಿಎಂಪಿ ಕಸದ ಲಾರಿ ಚಾಲಕ ಶಿವರಾಜ್ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ನಂದೇನು ತಪ್ಪಿಲ್ಲ. ಪದ್ಮಿನಿಯೇ ಗಾಡಿಗೆ ಅಡ್ಡ ಬಂದಿದ್ದು ಎಂದು ಹೇಳಿದ್ದಾನೆ. ಇದನ್ನು ಕಂಡ ಪ್ರತ್ಯಕ್ಷದರ್ಶಿ ಆಟೋ ಚಾಲಕನೊಬ್ಬ ಬಿಬಿಎಂಪಿ ಲಾರಿ ಚಾಲಕನದ್ದೇ ತಪ್ಪು ಎಂದು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾನೆ. ಒಟ್ಟಾರೆ ಬಿಬಿಎಂಪಿ ಕಸದ ಲಾರಿಯ ಜೀವದ ದಾಹಕ್ಕೆ ಮತ್ತೊಂದು ಬಲಿಯಾಗಿದೆ.
ಇದನ್ನೂ ಓದಿ: ಚಂದ್ರು ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿದ ಸಿಐಡಿ