ಬೆಂಗಳೂರು: ಮೈಸೂರು ನಗರದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಮಾಜವೇ ತಲೆ ತಗ್ಗಿಸುವಂತಹ ಘಟನೆ. ಮುಂದುವರಿದ ಸಮಾಜದಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಕಳವಳ ವ್ಯಕ್ತಪಡಿಸಿದರು.
ನಗರದ ಮಹದೇವಪುರ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಮಂಡಲದ ಕಿತ್ತಗನೂರು ಕಾಲೋನಿಯಲ್ಲಿ ಬಿಜೆಪಿ ವಾರ್ಡ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮದ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅತ್ಯಾಚಾರ ಪ್ರಕರಣ ಅಮಾನವೀಯ ಘಟನೆ. ಮುಂದುವರೆದ ಸಮಾಜದಲ್ಲಿ ಯಾರು ಕೂಡ ನಿರೀಕ್ಷಿಸದ ಘಟನೆಯಾಗಿದೆ. ಅರೋಪಿಗಳ ವಿರುದ್ದ ಕಠಿಣ ಕ್ರಮ ಜರುಗಿಸಲೇಬೇಕು ಎಂದು ಲಿಂಬಾವಳಿ ಒತ್ತಾಯಿಸಿದರು.
![aravinda limbavali reaction on mysore gang rape case](https://etvbharatimages.akamaized.net/etvbharat/prod-images/kn-bng-01-mysorgangrapearavindalimbavalireaction-vis-ka10002_27082021193106_2708f_1630072866_859.jpg)
ನಾಮಫಲಕ ಅಂಟಿಸುವ ಕಾರ್ಯ ಆರಂಭ
ದೇಶಾದ್ಯಂತ ಆರಂಭವಾಗಿರುವ ಭೂತ್ ಮಟ್ಟದ ಅಧ್ಯಕ್ಷರ ಮನೆಗೆ ನಾಮಫಲಕ ಅಂಟಿಸುವ ಕಾರ್ಯವನ್ನು ಮೊದಲ ಬಾರಿಗೆ ನಗರ ಮಂಡಲದ ಮಾರತಹಳ್ಳಿಯಲ್ಲಿ ಆರಂಭಿಸಲಾಗಿದೆ. ಇಂದು ಗ್ರಾಮಾಂತರ ಪ್ರದೇಶದ ಕಿತ್ತಗನೂರು ಗ್ರಾಮ ಪಂಚಾಯಿತಿಯ ಕಿತ್ತಗನೂರು ಕಾಲೋನಿಯ ವಾರ್ಡ್ ನಂಬರ್ 63, ಅಧ್ಯಕ್ಷ ರಾಜು ಅವರ ಮನೆಗೆ ನಾಮಫಲಕ ಅಳವಡಿಸುವ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.