ಬಳ್ಳಾರಿ: ಜಿಂದಾಲ್ ಕಾರ್ಖಾನೆಯನ್ನು ಸಂಪೂರ್ಣ ಸೀಲ್ಡೌನ್ ಮಾಡಬೇಕು ಮತ್ತು ಕಾರ್ಮಿಕರಿಗೆ ಸೂಕ್ತ ರಕ್ಷಣೆ ಹಾಗೂ ಜೀವನ ನಿರ್ವಹಣೆಗೆ ಅಗತ್ಯ ವಸ್ತುಗಳನ್ನು ಒದಗಿಸಬೇಕು ಎಂದು ಬಳ್ಳಾರಿ ಪ್ರಜಾಸತ್ತಾತ್ಮಕ ಪಕ್ಷಗಳ ಹಾಗೂ ಸಾಮೂಹಿಕ ಸಂಘಟನೆಗಳ ಒಕ್ಕೂಟವು ಜಿಂದಾಲ್ ಕಂಪನಿ ಮತ್ತು ಜಿಲ್ಲಾಡಳಿತದ ವಿರುದ್ಧ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿತು.
ಜಿಂದಾಲ್ನಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅಲ್ಲಿ ಕೊರೊನಾರಿಂದ ಮೃತಪಟ್ಟವರ ಮಾಹಿತಿಯನ್ನು ಮುಚ್ಚಿಡುತ್ತಿದೆ. ಹೀಗಾಗಿ, ಕಂಪನಿಯನ್ನು ಸೀಲ್ಡೌನ್ ಮಾಡಬೇಕು. ಇಲ್ಲವಾದಲ್ಲಿ ಕಂಪನಿಗೆ ಹೋಗುವ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಕುಡುತಿನಿ ಶ್ರೀನಿವಾಸ್ ಮತ್ತು ಜೆಡಿಎಸ್ ಮುಖಂಡ ಮೀನಳ್ಳಿ ತಾಯಣ್ಣ ಇದೇ ವೇಳೆ ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಎ.ಮಾನಯ್ಯ ಮಾತನಾಡಿ, ರೈತರ ವಿರುದ್ಧ ಕಾನೂನು ತಿದ್ದುಪಡಿಯನ್ನು ಮಾಡುವುದರಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ನಿರತರಾಗಿದ್ದಾರೆ. ಯಡಿಯೂರಪ್ಪ ಅವರ ಸರ್ಕಾರ ಜನ, ಕಾರ್ಮಿಕ, ರೈತರ ವಿರೋಧಿಯಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಒಕ್ಕೂಟದ ಆಗ್ರಹಗಳು
- ಜಿಂದಾಲ್ ಕಂಪನಿಯನ್ನು ಸಂಪೂರ್ಣವಾಗಿ ಸೀಲ್ಡೌನ್ ಮಾಡಬೇಕು.
- ಕಂಪನಿಯ ಕಾರ್ಮಿಕರನ್ನು ಕೈಗಾರಿಕಾ ಪ್ರದೇಶದಲ್ಲೇ ಕ್ವಾರಂಟೈನ್ ಮಾಡಬೇಕು.
- ಜಿಂದಾಲ್ ಕಾರ್ಮಿಕರಿಗೆ ತಿಂಗಳು ವೇತನ ಸಹಿತ ರಜೆ ಘೋಷಿಸಬೇಕು.
- ಕಾರ್ಮಿಕರನ್ನು ರ್ಯಾಂಡಮ್ ತಪಾಸಣೆಗೆ ಒಳಪಡಿಸಬೇಕು.
- ಸೋಂಕಿತ ಮತ್ತು ಶಂಕಿತರಿಗೆ ನೀಡುವ ಚಿಕಿತ್ಸಾ ವೆಚ್ಚವನ್ನು ಕಾರ್ಖಾನೆಯೇ ಭರಿಸಬೇಕು.