ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿಗೆ ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ಬಾಕ್ಸ್ವೊಂದನ್ನು ಸ್ಪೀಡ್ ಪೋಸ್ಟ್ ಮಾಡಲಾಗಿದೆ. ಬೆಳಗಾವಿಯಿಂದ ಪೋಸ್ಟ್ ಮಾಡಿರುವ ಈ ಬಾಕ್ಸ್ನಲ್ಲಿ ಏನಿದೆ ಎಂದು ಕೇಳಿದ್ರೆ ನಿಮಗೆ ಅಚ್ಚರಿಯಾಗಲಿದೆ.
ಉತ್ತರ ಕರ್ನಾಟಕ ಭಾಗ ನೆರೆಯಿಂದ ತತ್ತರಿಸಿ ಹೋಗಿದ್ದು, ಜನರ ಬದುಕು ಬೀದಿಗೆ ಬಂದಿದೆ. ರೈತರ ಮುಂಗಾರು ಬೆಳೆಯೂ ಕೊಚ್ಚಿ ಹೋಗಿದೆ. ಮನೆ-ಬೆಳೆ ಕಳೆದುಕೊಂಡು ರೈತರು ಕಷ್ಟ ಅನುಭವಿಸುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ನಯಾ ಪೈಸೆ ಪರಿಹಾರ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿರುವ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಪ್ರಧಾನಿ ಮೋದಿಯ ಗಮನ ಸೆಳೆಯಲು ಹೊಸ ಪ್ಲಾನ್ ಮಾಡಿದ್ದಾರೆ.
ನಗರದಲ್ಲಿ ಇಂದು ನಡೆದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ, ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಮಳೆಗೆ ನಾಶವಾದ ಬೆಳೆಯ ಹಿಡಿಯನ್ನು ತಲೆಮೇಲೆ ಇಟ್ಟುಕೊಂಡು ಬಂದಿದ್ದರು. ಬಳಿಕ ಹತ್ತಿ, ಸೋಯಾಬಿನ್, ಭತ್ತ ಸೇರಿದಂತೆ ಹಲವು ಬೆಳೆಗಳ ಹಿಡಿಯನ್ನು ಬಾಕ್ಸ್ನಲ್ಲಿ ಹಾಕಿ ಪ್ರಧಾನಿಗೆ ಸ್ಪೀಡ್ ಪೋಸ್ಟ್ ಮಾಡಿದ್ದಾರೆ. ಬೆಳೆ ನಾಶವಾಗಿದ್ದನ್ನು ಈ ಮೂಲಕವಾದರೂ ನೋಡಿ, ಪ್ರಧಾನಿ ಮೋದಿ ರಾಜ್ಯಕ್ಕೆ ಪರಿಹಾರ ಬಿಡುಗಡೆ ಮಾಡಲಿ ಎಂಬ ಕಾರಣಕ್ಕೆ ಈ ಹೀಗೆ ಮಾಡಲಾಗಿದೆ ಎಂದು ಪುಷ್ಪಾ, ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಅಲ್ಲದೇ ಪರಿಹಾರ ಬಿಡುಗಡೆ ಮಾಡಿಸುವಲ್ಲಿ ವಿಫಲರಾಗಿರುವ ರಾಜ್ಯದ ಬಿಜೆಪಿ ಸಂಸದರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.