ಸುವರ್ಣಸೌಧ(ಬೆಳಗಾವಿ): ರಾಜ್ಯದಲ್ಲಿ ಕೋವಿಡ್ ಇದೆ, ಬೆಲೆ ಏರಿಕೆಯಾಗಿದೆ. ಅಭಿವೃದ್ಧಿ ಕೆಲಸಗಳು ನಿಂತಿವೆ. ಈ ಎಲ್ಲ ಸಮಸ್ಯೆಗಳನ್ನು ವಿಷಯಾಂತರ ಮಾಡಲು ಮತಾಂತರ ಕಾಯ್ದೆ ತರಲಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಮತಾಂತರ ಕಾಯ್ದೆ ಬಗೆಗಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಡವರಿಗೆ, ರೈತರಿಗೆ, ಮಹಿಳೆಯರಿಗೆ, ದಲಿತರಿಗೆ ಏನೂ ಮಾಡಿಲ್ಲ. ಆರ್ಥಿಕ, ಸಾಮಾಜಿಕ ಸಮಸ್ಯೆ ಪರಿಹಾರ ಮಾಡಲು ಈ ಸರ್ಕಾರದ ಕೈಯಲ್ಲಿ ಆಗಿಲ್ಲ. ಎರಡೂವರೆ ವರ್ಷದಿಂದ ಒಂದು ಮನೆ ಕಟ್ಟಿಸಲು ಆಗಿಲ್ಲ ಎಂದು ಆರೋಪಿಸಿದರು.
ಜನರ ಮನಸ್ಸನ್ನು ಬೇರೆ ಕಡೆ ತಿರುಗಿಸಲು ಭಾವನಾತ್ಮಕ ಕಾನೂನು ಜಾರಿಗೆ ತರಲು ಹೊರಟಿದ್ದಾರೆ. ಈ ಕಾನೂನು ಸಂವಿಧಾನ ವಿರೋಧಿ, ಜನರ ವಿರೋಧಿ ಕಾನೂನು. ಕಾಂಗ್ರೆಸ್ ಇದನ್ನು ತೀವ್ರವಾಗಿ ವಿರೋಧ ಮಾಡುತ್ತದೆ ಎಂದು ಹೇಳಿದರು.
'ಬಲವಂತದ ಮತಾಂತರಕ್ಕೆ ವಿರೋಧವಿದೆ'
ಸಂವಿಧಾನದಲ್ಲಿ ಈಗಾಗಲೇ ಈ ಕಾನೂನು ಇದೆ. ಗುಜರಾತ್ ಸರ್ಕಾರ ತಂದ ಬಿಲ್ಗೆ ಹೈಕೋರ್ಟ್ ತಡೆ ನೀಡಿದೆ. ಅದೇ ರೀತಿ ರಾಜ್ಯದಲ್ಲಿ ತಂದಿರುವ ವಿಧೇಯಕ ಸಹ ನಿಲ್ಲಲ್ಲ. ಬಲವಂತವಾಗಿ ಮತಾಂತರ ಮಾಡಿದರೆ ಶಿಕ್ಷೆ ಕೊಡಲಿ. ಈ ಕಾಯ್ದೆ ಜಾರಿ ಸರಿಯಲ್ಲ. ಈ ಕಾಯ್ದೆಯ ಅಗತ್ಯ ಇರಲಿಲ್ಲ ಎಂದರು.
ಮತಾಂತರದಿಂದ ಸಮಾಜದ ಶಾಂತಿ ಹಾಳಾಗಿದೆ ಎಂದೆಲ್ಲಾ ಹೇಳುವುದು ಸರಿಯಲ್ಲ. ಬಲವಂತದ ಮತಾಂತರಕ್ಕೆ ನಮ್ಮ ವಿರೋಧವಿದೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಿ. ಆದರೆ, ದುರುದ್ದೇಶದಿಂದ ಕಾಯ್ದೆಯನ್ನು ಜಾರಿ ಮಾಡುತ್ತಿದ್ದೀರಾ, ಇದು ಸರಿಯಲ್ಲ. ಒಂದು ಸಮುದಾಯವನ್ನು ಗುರಿಯಾಗಿಸಿ ಕಾಯ್ದೆ ಜಾರಿಗೆ ತಮ್ಮ ವಿರೋಧವಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಕ್ರೈಸ್ತ ಸಮುದಾಯದವರು ಹಲವು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಅಲ್ಲಿ ಮತಾಂತರ ನಡೆದಿದೆಯೇ ಎಂದು ಪ್ರಶ್ನಿಸಿ ಶಾಸಕ ಗೂಳಿಹಟ್ಟಿ ಶೇಖರ್ ತಮ್ಮ ತಾಯಿಯವರು ಮತಾಂತರವಾಗಿದ್ದನ್ನು ಪ್ರಸ್ತಾಪಿಸಿದ್ದಾರೆ. ಅವರು ಏಕೆ ದೂರು ಕೊಟ್ಟಿಲ್ಲ ಎಂದು ಪ್ರಶ್ನಿಸಿದರು. ಆಗ ಸಚಿವ ಆರ್. ಅಶೋಕ್ ಎದ್ದುನಿಂತು ಬೆಂಗಳೂರಿನ ಮಹದೇವುರದಲ್ಲಿ ಶಾಲಾ ಮಕ್ಕಳನ್ನು ಬಲವಂತವಾಗಿ ಮತಾಂತರ ಮಾಡುತ್ತಿರುವ ಬಗ್ಗೆ ದೂರು ದಾಖಲಾಗಿದೆ ಎಂಬುದನ್ನು ಸದನದ ಗಮನಕ್ಕೆ ತಂದರು.
ಆಗ ಸಿದ್ದರಾಮಯ್ಯನವರು ಬಲವಂತದ ಮತಾಂತರ ಮಾಡಿದರೆ ಕ್ರಮ ಕೈಗೊಳ್ಳಿ. ನಮ್ಮದೇನು ಅಭ್ಯಂತರವಿಲ್ಲ ಎಂದು ಹೇಳಿ ತಮ್ಮ ಮಾತು ಮುಂದುವರೆಸಿ, ಈ ಕಾಯ್ದೆಯಲ್ಲಿ ಮದುವೆಯಾದವರಿಗೆ ಮತಾಂತರ ನಿಷೇಧಿಸಿದ್ದೀರಿ. ಪ್ರೀತಿ ಮಾಡಿ ಬೇರೆ ಧರ್ಮದವರ ಮದುವೆಯಾದವರಿಗೆ ಇದರಿಂದ ತೊಂದರೆಯಾಗುತ್ತದೆ. ಇದು ಸರಿಯಲ್ಲ. ಮದುವೆಗೆ ಅಡ್ಡಿ ಬರುವುದಕ್ಕೆ ನೀವು ಯಾರು ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು.
ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕ್ರೈಸ್ತರ ಜನಸಂಖ್ಯೆ ಕಡಿಮೆ ಇದೆ. ನೀವು ಹೇಳಿದಂತೆ ಮತಾಂತರ ಆಗಿದ್ದರೆ ಜನಸಂಖ್ಯೆ ಹೆಚ್ಚಿರಬೇಕಿತ್ತು. ಬಲವಂತದ ಮತಾಂತರವಾಗುತ್ತಿದೆ ಎಂಬ ವಾದ ಅರ್ಥಹೀನ ಎಂದರು.
ಸದನದಲ್ಲಿ ಗದ್ದಲ:
ಈ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರನ್ನು ಮತಾಂತರ ಮಾಡಿದರೆ ಅಂತಹವರಿಗೆ 3 ರಿಂದ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವುದಾಗಿ ಹೇಳಿದ್ದೀರಿ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದಲ್ಲಿ ಕಾನೂನು ಮುಂದೆ ಎಲ್ಲರೂ ಸರಿ ಸಮಾನರು ಎಂದು ಹೇಳಿದ್ದಾರೆ. ಹೀಗೆ ಪರಿಶಿಷ್ಟ ಜಾತಿ, ವರ್ಗದವರಿಗೆ ಬೇರೆ ಕಾನೂನು ಮಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದು ಮಾತಿನ ಚಕಮಕಿಗೆ ಕಾರಣವಾಗಿ ಸದನದಲ್ಲಿ ಗದ್ದಲದ ಉಂಟಾಯಿತು.
ಗದ್ದಲದಲ್ಲೇ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪರಿಶಿಷ್ಟ ಜಾತಿ ವರ್ಗದವರು ಅಮಾಯಕರು, ಮುಗ್ದರಿದ್ದಾರೆ. ಅವರನ್ನು ರಕ್ಷಿಸಲು ಈ ಕಾಯ್ದೆ ಮಾಡಿದ್ದೇವೆ. ಅವರ ರಕ್ಷಣೆ ಬೇಡವೇ, ಅವರ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಮಾಡಿರುವಾಗ ನೀವು ಈ ರೀತಿ ಹೇಳುವುದು ತಪ್ಪು. ಮಹಿಳೆಯರು, ಪರಿಶಿಷ್ಟ ಜಾತಿ ವರ್ಗದವರ ರಕ್ಷಣೆಗಾಗಿಯೇ ಈ ಕಾಯ್ದೆಯಲ್ಲಿ ಹೆಚ್ಚಿನ ಶಿಕ್ಷೆಯ ಅಂಶವನ್ನು ಸೇರಿಸಿದ್ದೇವೆ ಎಂದು ತಿರುಗೇಟು ನೀಡಿದರು.
ಅಂಬೇಡ್ಕರ್ ಮತಾಂತರ ಪರ, ವಿರೋಧದ ಮಾತು
ಈ ಹಂತದಲ್ಲಿ ಡಾ.ಅಂಬೇಡ್ಕರ್ರವರು ಮತಾಂತರದ ಬಗ್ಗೆ 1936ರಲ್ಲಿ ಹೇಳಿದ ಮಾತು, ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿ, ಅಂಬೇಡ್ಕರ್ರವರ ಮಾತಿನ ಅಂಶಗಳನ್ನು ಸರಿಯಾಗಿ ಅರ್ಥೈಸಿ ಎಂದು ಸಭಾಧ್ಯಕ್ಷ ಕಾಗೇರಿ ಅವರು ಮಧ್ಯಪ್ರವೇಶಿಸಿದರು.
ಈ ಕುರಿತ ಹೆಚ್ಚಿನ ಚರ್ಚೆಗಳಿಗೆ ಕಾರಣವಾಗಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮತಾಂತರದ ಬಗ್ಗೆ ಆಡಿರುವ ಹಲವು ಮಾತುಗಳನ್ನು ತಮ್ಮ ತಮ್ಮ ವಾದಗಳಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರುಗಳು ಬಳಸಿಕೊಂಡು, ಅಂಬೇಡ್ಕರ್ ಅವರು ಮತಾಂತರ ವಿರೋಧವಾಗಿರಲಿಲ್ಲ ಎಂದು ಕಾಂಗ್ರೆಸ್ನವರು ಹೇಳಿದರೆ, ಬಿಜೆಪಿ ಸದಸ್ಯರು ಅಂಬೇಡ್ಕರ್ ಅವರ ಮತಾಂತರವನ್ನು ಎಂದೂ ಸಮರ್ಥಿಸಿಲ್ಲ. ಮತಾಂತರವನ್ನು ರಾಷ್ಟ್ರಾಂತರ ಎಂದು ಹೇಳಿದ್ದಾರೆ ಎಂದು ಹೇಳಿದ್ದು ಮಾತಿನ ಚಕಮಕಿ ಮತ್ತಷ್ಟು ಹೆಚ್ಚಾಗಿ ಗದ್ದಲ ತಾರಕಕ್ಕೇರಿತು.
ಈ ಗದ್ದಲದಲ್ಲೇ ಮಾತನಾಡಿದ ಸಚಿವ ಡಾ. ಕೆ.ಸುಧಾಕರ್ ಅವರು, ಮಹಾತ್ಮ ಗಾಂಧೀಜಿ ಸಹ ಮತಾಂತರ ನಿಷೇಧದ ಪರವಾಗಿದ್ದರು ಎಂದು ಹೇಳಿದ್ದು, ಮಾತಿನ ಚಕಮಕಿಯ ಬೆಂಕಿಗೆ ತುಪ್ಪ ಸುರಿದಂತಾಗಿ ವಾಕ್ಸಮರ ಮತ್ತಷ್ಟು ಬಿರುಸಾಯಿತು. ಶಾಸಕ ಎನ್.ಮಹೇಶ್ ಮಾತನಾಡಿ, 1956ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಒಂದು ಮಾತು ಹೇಳಿದ್ದರು.
ನಿಜವಾಗಿ ಹೇಳುವುದಾದರೆ ನಾನು ಆರಿಸಿಕೊಂಡ ಧರ್ಮ ಹೊಸದಲ್ಲ. ಇದು ಹೊರಗಿನಿಂದ ಬಂದಿರುವ ಧರ್ಮವೂ ಅಲ್ಲ. ಬೌದ್ಧ ಧರ್ಮ ಈ ನೆಲದ್ದಾಗಿದೆ. ಹೀಗಾಗಿ ಇದು ಮತಾಂತರ ಅಲ್ಲವೆಂದು ಹೇಳಿದ್ದರು. ತಾನು ನನ್ನ ಮೂಲ ಧರ್ಮಕ್ಕೆ ಹೋಗುತ್ತೇನೆಂದು ಅವರು ಹೇಳಿದ್ದರು ಎಂದು ಅಂಬೇಡ್ಕರ್ ಮಾತನ್ನು ಉಲ್ಲೇಖಿಸಿದರು.
'ಬೌದ್ಧ ಧರ್ಮಕ್ಕೆ ಹೋಗುವುದು ಮತಾಂತರವಲ್ಲ'
ಕಾನೂನು ಮಾಧುಸ್ವಾಮಿ ಕೂಡ ಮಾತನಾಡಿ, ಬೌದ್ಧಧರ್ಮಕ್ಕೆ ಹೋಗುವುದು ಮತಾಂತರವಲ್ಲ ಎಂದಿದ್ದಾರೆ. ಬೌದ್ಧ ಧರ್ಮಕ್ಕೆ ಹೋಗುವುದು ಮತಾಂತರವಲ್ಲ. ಬೌದ್ಧ ಧರ್ಮವೂ ಹಿಂದೂ ಧರ್ಮದ ಭಾಗವಾಗಿದೆ ಎಂದು ಹೇಳಿದರು.
ನಂತರ ಮಾತನಾಡಿದ ಸಿದ್ದರಾಮಯ್ಯ, ಅಂಬೇಡ್ಕರ್ ಅವರ ಮತ್ತೊಂದು ಮಾತನ್ನು ಉಲ್ಲೇಖಿಸಿದರು. ‘‘ಅಂಬೇಡ್ಕರ್ ಅವರು, ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುವುದಿಲ್ಲ. ಹಿಂದೂ ಧರ್ಮ ಸುಧಾರಣೆಗೆ ನಾನು ಪ್ರಯತ್ನ ಮಾಡಿದ್ದೇನೆ. ಆದರೆ, ನನ್ನಿಂದ ಅದು ಸಾಧ್ಯವಾಗಲೇ ಇಲ್ಲ. ಯಾರಿಗೆ ನೋವಾಗಿದ್ದರೆ ಅವರು ಮತಾಂತರವಾಗಿ ಎಂದಿದ್ದರು ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
ಯಾರನ್ನು ಸುಲಭವಾಗಿ ಮತಾಂತರ ಮಾಡಲು ಸಾಧ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ವರ್ಗದವರು ಬಡತನ, ಕಷ್ಟದಿಂದ ಆಮಿಷಗಳಿಗೆ ಒಳಗಾಗಿ ಮತಾಂತರವಾಗುತ್ತರೆ ಎಂಬ ಕಾರಣದಿಂದ ಅವರಿಗೆ ಹೆಚ್ಚಿನ ರಕ್ಷಣೆಯನ್ನು ಈ ಕಾನೂನಿನಲ್ಲಿ ನೀಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಕಾಯ್ದೆಯನ್ನು ಸಮರ್ಥಿಸಿಕೊಂಡರು.
'ಮತಾಂತರ ನಿಷೇಧ ಕಾಯ್ದೆಗೆ ನಮ್ಮ ವಿರೋಧ ಇದೆ'
ಮಾತಿನ ಚಕಮಕಿಗೆ ಕಡಿವಾಣ ಹಾಕಿ ಸದನದಲ್ಲಿನ ಗದ್ದಲವನ್ನು ನಿಯಂತ್ರಿಸಿದ ಸ್ಪೀಕರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮಾತು ಮುಂದುವರೆಸುವಂತೆ ತಿಳಿಸಿದರು. ನಂತರ ಕಾಯ್ದೆ ಮೇಲಿನ ಚರ್ಚೆಯನ್ನು ಮುಂದುವರೆಸಿದ ಸಿದ್ದರಾಮಯ್ಯ ಕಾಯ್ದೆಗೆ ತಮ್ಮ ವಿರೋಧವಿದೆ. ಇದನ್ನು ಒಪ್ಪುವುದಿಲ್ಲ. ಕಾಯ್ದೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.
ಮತಾಂತರ ಮೊದಲಿನಿಂದಲೂ ನಡೆದಿದೆ. ಹಿಂದಿನಿಂದಲೂ ಬಸವಾದಿ ಶರಣರು ತಮ್ಮ ಧರ್ಮಕ್ಕೆ ಬರುವವರನ್ನು ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಎಂದಾಗ ಮಧ್ಯೆ ಪ್ರವೇಶಿಸಿದ ಮಾಧುಸ್ವಾಮಿ ಅವರು, ವಿಧೇಯಕದಲ್ಲಿ ಜಾತಿ ಪ್ರಸ್ತಾಪವಾಗಿಲ್ಲ. ಹಿಂದೂ ಧರ್ಮದಲ್ಲಿ ಆ ರೀತಿಯಾಗುತ್ತಿದೆ. ಧರ್ಮದಿಂದ ಮತ್ತೊಂದು ಧರ್ಮಕ್ಕೆ ಬಲವಂತಾಗಿ ಮತಾಂತರ ಮಾಡುವುದಕ್ಕೆ ತಡೆ ಹಾಕಲು ಈ ಕಾಯ್ದೆ ಜಾರಿ ಎಂದು ಸ್ಪಷ್ಟಪಡಿಸಿದರು.
ಬಲವಂತದ ಮತಾಂತರಕ್ಕೆ ತಡೆ ಹಾಕಲು ಈ ಕಾಯ್ದೆ ಜಾರಿಗೊಳಿಸುವ ಮುನ್ನ ಅದರಲ್ಲಿನ ಸಾಧಕ - ಬಾಧಕಗಳ ಬಗ್ಗೆ ಎಲ್ಲರೊಂದಿಗೂ ಚರ್ಚಿಸಬೇಕಿತ್ತು. ಬಲವಂತದ ಮತಾಂತರಕ್ಕೆ ತಮ್ಮ ವಿರೋಧವಿದೆ. ಆದರೆ, ಸ್ವಯಂ ಪ್ರೇರಣೆ ಮತಾಂತರಕ್ಕೆ ತಡೆ ಹಾಕುವುದು ಸರಿಯಲ್ಲ ಎಂದರು.
ಈಶ್ವರಪ್ಪ- ಸಿದ್ದರಾಮಯ್ಯ ಅವರ ಸ್ನೇಹದ ಬಗ್ಗೆ ಚರ್ಚೆ :
ಮತಾಂತರ ನಿಷೇಧ ಕಾಯ್ದೆಯ ಗಂಭೀರ ಚರ್ಚೆಯ ನಡುವೆಯೂ ಸದನದಲ್ಲಿ ಹಾಸ್ಯಚಟಾಕಿ ಆಗಾಗ ಬರುತ್ತಲೇ ಇತ್ತು. ಮಾತಿನ ವೇಳೆ ಸಚಿವ ಈಶ್ವರಪ್ಪ ಅವರ ಹೆಸರನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದಾಗ, ಸ್ಪೀಕರ್ ಮಧ್ಯಪ್ರವೇಸಿ ನಿಮ್ಮದು ಅವರದ್ದು ಎಂತಹ ಸ್ನೇಹ ಎಂದು ತಮಾಷೆ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಮ್ಮದು ಲವ್ ಆ್ಯಂಡ್ ಹೇಟ್ ರಿಲೇಷನ್ ಶಿಪ್ ಎಂದು ನಕ್ಕರು. ನಮ್ಮ ಸಂಬಂಧದ ಕುರಿತು ಬಿಡುವಿನ ವೇಳೆಯಲ್ಲಿ ಸಿಕ್ಕಿದಾಗ ಉತ್ತರಿಸುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಸಿದ್ದರಾಮಯ್ಯ- ಅರವಿಂದ ಲಿಂಬಾವಳಿ ವಾಗ್ವಾದ:
ಮಧ್ಯಪ್ರವೇಶಿಸಿದ ಸ್ಪೀಕರ್ ಕಾನೂನು ಎಲ್ಲರಿಗೂ ಒಂದೇ ಎಂದು ಸಂವಿಧಾನ ಹೇಳುತ್ತದೆ. ಅದನ್ನೇ ನಾನು ಈಗ ಹೇಳುತ್ತಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾತಿಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ಸೆಕ್ಷನ್ 5ರ ಬಗ್ಗೆ ಉಲ್ಲೇಖ ಮಾಡಿದ ಸಿದ್ದರಾಮಯ್ಯ, ತಾರತಮ್ಯ ಮಾಡಿರುವುದು ಏಕೆಂದು ಪ್ರಶ್ನಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಅರವಿಂದ ಲಿಂಬಾವಳಿ, ಮತಾಂತರ ಆದರೂ ಕೆಲವರು ಹಿಂದೂ ಧರ್ಮದಲ್ಲೇ ಇದ್ದಾರೆ. ಬಿಲ್ ತಂದರೆ ಸರಿಯಾದ ಅಂಕಿ - ಸಂಖ್ಯೆ ಸಿಗುತ್ತದೆ ಎಂದರು. ಈ ಹೇಳಿಕೆಗೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ನಿಮಗೆ ಏನೂ ಗೊತ್ತಿಲ್ಲ ಕುಳಿತುಕೊಳ್ಳಿ ಎಂದರು. ಆಗ, ಸಿಟ್ಟಿಗೆದ್ದ ಅರವಿಂದ ಲಿಂಬಾವಳಿ ಈ ರೀತಿ ನೀವು ಹೇಳಬಾರದು ಎಂದರು. ಆ ವೇಳೆ, ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಯಿತು.
ಸಿದ್ದರಾಮಯ್ಯ ಪ್ರತಿಕ್ರಿಯೆಗೆ ಸ್ಪೀಕರ್ ಕಾಗೇರಿ ಪ್ರತಿಕ್ರಿಯಿಸಿ, ನಿಮ್ಮ ಹಿರಿತನಕ್ಕೆ ತಕ್ಕ ಮಾತುಗಳಲ್ಲ ಎಂದರು. ನಾನು ಹೇಳಿದ್ದು ಅಸಾಂವಿಧಾನಿಕ ಅಂತಾದರೆ ಪದ ತೆಗೆದುಹಾಕಿ’ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಆಗ ಸಹಿ ಈಗೇಕೆ ವಿರೋಧ?..ಬಿಜೆಪಿ 'ದಾಖಲೆ' ಬಾಣಕ್ಕೆ 'ಕೈ' ಗಲಿಬಿಲಿ..ಮಾಧುಸ್ವಾಮಿ-ಸಿದ್ದರಾಮಯ್ಯ 'ಮತಾಂತರ' ಜಟಾಪಟಿ