ಬೆಳಗಾವಿ: ಅಗತ್ಯವಸ್ತುಗಳ ಖರೀದಿಗಿದ್ದ ಸಮಯಾವಕಾಶ ಮುಗಿದರೂ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಕುಂದಾನಗರಿ ಜನರಿಗೆ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್.ಅಂಗಡಿ ವಸ್ತುಗಳನ್ನು ಜಪ್ತಿ ಮಾಡಿ ಕೇಸು ದಾಖಲಿಸುವ ಎಚ್ಚರಿಕೆ ನೀಡಿ ಅಂಗಡಿಗಳನ್ನು ಬಂದ್ ಮಾಡಿಸಿದರು.
ನಗರದ ಗಣಪತಿ ಬೀದಿ, ಶನಿವಾರ ಪೇಟೆ, ರವಿವಾರ ಪೇಟೆ ಹಾಗೂ ಮೇನ್ ಮಾರ್ಕೆಟ್ನಲ್ಲಿನ ಜನರು ಕೊರೊನಾ ಕರ್ಫ್ಯೂ ಮೊದಲನೇ ದಿನವೇ ನಿರ್ಲಕ್ಷ್ಯವಹಿಸುತ್ತಿದ್ದರು. ಬೆಳಗ್ಗೆ 10.30 ಗಂಟೆಯಾದರೂ ವ್ಯಾಪಾರ ನಡೆಸುತ್ತಿದ್ದ ಕಾರಣ ಪಾಲಿಕೆ ಆಯುಕ್ತ ಜಗದೀಶ್ ಬೀದಿ ಬದಿಯ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡುವಂತೆ ಎಚ್ಚರಿಕೆ ನೀಡಿದರು. ಜೊತೆಗೆ ಮತ್ತೊಮ್ಮೆ ಈ ರೀತಿ ಮಾಡಿದ್ರೆ ಅಂಗಡಿಗಳನ್ನು ಸೀಜ್ ಮಾಡಿ ದಂಡ ಹಾಕುತ್ತೇವೆ ಎಂದು ಬೆದರಿಸಿದರು.
ಇದಲ್ಲದೇ ಲಾಠಿಯೊಂದಿಗೆ ಬೆಳಗಾವಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಪೊಲೀಸರು ರೌಂಡ್ಸ್ ಹಾಕಿ ಬೀದಿ ಬದಿ ವ್ಯಾಪಾರಸ್ಥರಿಗೆ ಮನೆಗೆ ತೆರಳುವಂತೆ ಖಡಕ್ ವಾರ್ನಿಂಗ್ ನೀಡಿದರು. ಪೊಲೀಸರು ಬರುತ್ತಿದ್ದಂತೆ ವ್ಯಾಪಾರಿಗಳು ತರಾತುರಿಯಲ್ಲಿ ಅಂಗಡಿ ಮುಚ್ಚಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಗದೀಶ್ ಕೆ.ಎಚ್, ಬೆಳಿಗ್ಗೆ 10ಗಂಟೆಯವರೆಗೆ ಅಗತ್ಯವಸ್ತುಗಳ ಸೇವೆಗೆ ಅವಕಾಶವಿದ್ದು, ನಂತರದಲ್ಲಿ ನಡೆಯುವ ವ್ಯಾಪಾರ ತಡೆಯಲು ಪಾಲಿಕೆ ವ್ಯಾಪ್ತಿಯಲ್ಲಿ ಪೊಲೀಸರು, ಹಾಗೂ ಪಾಲಿಕೆ ಸಿಬ್ಬಂದಿಯನ್ನು ಬಳಸಿಕೊಂಡು ಕೊರೊನಾ ಕರ್ಫ್ಯೂ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಒಂದು ವೇಳೆ ನಿಗದಿತ ಸಮಯದ ನಂತರದಲ್ಲಿ ವ್ಯಾಪಾರ ನಡೆಸುತ್ತಿರುವುದು ಕಂಡು ಬಂದ್ರೆ ಅಂಥವರ ಅಂಗಡಿಗಳ ಮೇಲೆ ಕೇಸ್ ಹಾಕಿ ಸೀಜ್ ಮಾಡುತ್ತೇವೆ. ಟ್ರೇಡ್ ಲೈಸೆನ್ಸ್ ರದ್ದು ಮಾಡ್ತೇವೆ. ಇದರ ಜೊತೆಗೆ ಖುದ್ದು ಸೀಲ್ ಮಾಡುತ್ತೇವೆ ಎಂದರು.
ಸಾರ್ವಜನಿಕರು ಅನಾವಶ್ಯಕವಾಗಿ ರಸ್ತೆಗೆ ಬರಬೇಡಿ. ಬಂದ್ರೂ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಚಿಕ್ಕಪುಟ್ಟ ಆಸೆಗಳಿಗೆ ಯಾರೂ ಬಲಿ ಆಗಬೇಡಿ ಎಂದ ಮನವಿ ಮಾಡಿಕೊಂಡರು.