ನವದೆಹಲಿ: ಈಶಾನ್ಯ ರಾಜ್ಯಗಳ ಕೃಷಿ ಮತ್ತು ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವಂತೆ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) 'ಕೃಷಿ ಉಡಾನ್ ಯೋಜನೆ' ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಎಐನ ಪ್ರಾದೇಶಿಕ ಕಾರ್ಯನಿರ್ವಾಹಕ ನಿರ್ದೇಶಕ (ಈಶಾನ್ಯ) ಸಂಜೀವ್ ಜಿಂದಾಲ್ ಮಾತನಾಡಿ, ಈಶಾನ್ಯ ಪ್ರದೇಶದಲ್ಲಿ ದೇಶಿಯ ಸರಕು ಸಾಗಣೆದಾರರು ತಮ್ಮ ಸೇವೆಗಳನ್ನು ಪ್ರಾರಂಭಿಸಿದ ನಂತರ ಇದು ಅವರ ಆಶಯಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಕೃಷಿ ಉಡಾನ್ ಯೋಜನೆಯಡಿ ಈ ಪ್ರದೇಶದಲ್ಲಿ ವಿಮಾನ ಸೇವೆಗಳನ್ನು ಪ್ರಾರಂಭಿಸಲಾಗಿದೆ. ಹೆಚ್ಚಿನ ಮೌಲ್ಯದ ಉತ್ಪನ್ನಗಳನ್ನು ಬೆಳೆಯುವ ಸ್ಥಳೀಯ ರೈತರು ಮತ್ತು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡು ಗುರಿಯನ್ನು ಈ ಯೋಜನೆ ಹೊಂದಿದೆ ಎಂದರು.
ಕೃಷಿ ಉಡಾನ್ ಯೋಜನೆಯಡಿ ಕೋಲ್ಕತ್ತಾದ ಮೊದಲ ದೇಶಿ ಸರಕು ಸಾಗಣೆದಾರ ಸ್ಪೈಸ್ ಜೆಟ್, 5,800 ಕೆ.ಜಿ. ಸರಕುಗಳನ್ನು ಹೊತ್ತು ತಂದು ಮಿಜೋರಾಂ ರಾಜಧಾನಿ ಐಜ್ವಾಲ್ನ ಲೆಂಗ್ಪುಯಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಂಜೆ ಬಂದಿಳಿದಿದೆ ಎಂದು ಎಎಐ ಅಧಿಕಾರಿಗಳು ತಿಳಿಸಿದ್ದಾರೆ.
ಮಿಜೋರಾಂನಿಂದ ಹೊರಹೋಗುವ ಸರಕುಗಳಾದ ಕಿತ್ತಳೆ, ನಿಂಬೆ, ಬಾಳೆಹಣ್ಣು, ಶುಂಠಿ, ಅನಾನಸ್ ಮತ್ತು ಕತ್ತರಿಸಿದ ಹೂವುಗಳನ್ನು ಕೋಲ್ಕತ್ತಾಗೆ ಕೊಂಡೊಯ್ಯಲಾಯಿತು. ಇವೆಲ್ಲವೂ ಸ್ಥಳೀಯರು ಬೆಳೆಸಿದ ಕೃಷಿ ಉತ್ಪನ್ನಗಳಾಗಿವೆ ಎಂದು ಹೇಳಿದರು.
ಭಾರತದ ಈಶಾನ್ಯ ಪ್ರದೇಶವು ಶ್ರೀಮಂತ, ಹಸಿರು ಮತ್ತು ಸಾವಯವ ಕೃಷಿ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಅದು ದೇಶಿಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆ ಹೊಂದಿದೆ. ಹೆಚ್ಚಿನ ವೇಗದ ಸರಕು ಸೇವೆಗಳೊಂದಿಗೆ ಕೈಗೆಟುಕುವ ಸರಕು ದರಗಳೊಂದಿಗೆ ಅವುಗಳನ್ನು ಸಂಪರ್ಕಿಸುವ ಅವಶ್ಯಕತೆಯಿದೆ. ನಿಗದಿತ ಸಮಯದ ಚೌಕಟ್ಟಿನೊಳಗೆ ಶೇಖರಣೆ ಮತ್ತು ಸಂಪರ್ಕದ ಕೊರತೆಯಿಂದ ಉತ್ಪನ್ನಗಳು ವ್ಯರ್ಥವಾಗುತ್ತವೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ರೈತರಿಗೆ ಹೇಗೆ ಅನುಕೂಲ?
ದೇಶಿಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಕೃಷಿ ಉತ್ಪನ್ನಗಳನ್ನು ಸಾಗಿಸಲು ರೈತರಿಗೆ ನೆರವಾಗಲು ನಾಗರಿಕ ವಿಮಾನಯಾನ ಸಚಿವಾಲಯವು ಕೃಷಿ ಉಡಾನ್ ಹೆಸರಿನಲ್ಲಿ ಯೋಜನೆಯನ್ನು ಪ್ರಾರಂಭಿಸಲಿದೆ ಎಂದು ಹಣಕಾಸು ಸಚಿವರು ಬಜೆಟ್ ವೇಳೆಯಲ್ಲಿ ಹೇಳಿದ್ದರು.
ಈ ಯೋಜನೆಯು ರೈತರಿಗೆ ದೇಶಿಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶ ನೀಡುತ್ತದೆ. ಈಶಾನ್ಯ ಮತ್ತು ಬುಡಕಟ್ಟು ಪ್ರದೇಶಗಳಿಗೆ ಸೇರಿದ ರೈತರಿಗೆ ಪ್ರಯೋಜನಕಾರಿಯಾಗಬಲ್ಲದು. ಜಾಗತಿಕ ಮಾರುಕಟ್ಟೆಗಳೊಂದಿಗೆ ಪರಿಣಾಮಕಾರಿಯಾಗಿ ಸಂಪರ್ಕಿಸುವ ಗುರಿ ಹೊಂದಿದೆ. ಇದರಿಂದಾಗಿ ಉತ್ಪನ್ನಗಳ ನೈಜ ಮೌಲ್ಯವನ್ನು ಅರಿತುಕೊಳ್ಳಲು ರೈತರಿಗೆ ಸಹಾಯಕವಾಗುತ್ತದೆ. ಇದು ಅವರ ಆದಾಯ ಹೆಚ್ಚಿಸಲು ಮತ್ತು ಮಾರುಕಟ್ಟೆಯಲ್ಲಿ ಅವರ ಸ್ಪರ್ಧಾತ್ಮಕತೆ ವೃದ್ಧಿಸಲು ಸಹಾಯ ಮಾಡುತ್ತದೆ.