ನವದೆಹಲಿ: ಟೆಲಿಕಾಂ ಕಂಪನಿಗಳನ್ನು ಪ್ರತಿನಿಧಿಸುವ ಸಂಘಟನೆ ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ (ಸಿಒಎಐ) ಸದಸ್ಯರಾದ ಭಾರ್ತಿ ಏರ್ಟೆಲ್, ವೋಡಾಫೋನ್ ಮತ್ತು ರಿಲಯನ್ಸ್ ಜಿಯೋ ಒಗ್ಗೂಡಿದ್ದು, ಕಳೆದ ಎರಡು ವರ್ಷಗಳಿಂದ ಸ್ಥಗಿತವಾಗಿದ್ದ ಟೆಲಿಕಾಂ ವಲಯದ ಸ್ಪೆಕ್ಟ್ರಮ್ ಹಣ ಪಾವತಿ ನಿವಾರಣೆ ಆಗಲಿದೆ ಜೊತೆಗೆ ಈ ವಲಯವು ಸಾಲ ಮುಕ್ತವಾಗಲಿದೆ ಎಂದು ಹೇಳಿದೆ.
ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ (ಸಿಒಎಐ) ಡಿಜಿ ರಾಜನ್ ಮ್ಯಾಥ್ಯುಸ್ ಮಾತನಾಡಿ, ಮೊಬೈಲ್ ಡೇಟಾ ಹಾಗೂ ಕರೆ ದರ ಹೆಚ್ಚಳದಿಂದ ಉದ್ಯಮದ ಮೇಲಿದ್ದ ಒತ್ತಡವು ಕಡಿಮೆಯಾಗಲಿದೆ. ಸ್ಪರ್ಧಾತ್ಮಕ ಪೈಪೋಟಿ ಕಂಡುಬರಲಿದೆ ಎಂದು ಹೇಳಿದರು.
ಕಳೆದ ಎರಡು ವರ್ಷಗಳಲ್ಲಿ ಉದ್ಭವವಾಗಿದ್ದ ಸ್ಪೆಕ್ಟ್ರಮ್ ಹಣ ಪಾವತಿ, ದರ ಏರಿಕೆಯ ಪ್ರಸ್ತವಾನೆ ಹಾಗೂ ಒಟ್ಟು ನಿವ್ವಳ ಆದಾಯ ಅಡೆಚಣೆಗಳು ದೂರಾಗಲಿವೆ. ಇದು ಟೆಲಿಕಾಂ ವಲಯದ ಮರುಪ್ರಗತಿಗೆ ಸಹಾಯಕವಾಗಲಿದೆ ಎಂದರು.
ವೈರಿಯಂತೆ ಕಾದಾಡಿದ್ದ ಸಿಒಎಐ- ಜಿಯೋ
ಟೆಲಿಕಾಂ ವಲಯವು ಬಿಕ್ಕಟ್ಟು ಎದುರಿಸುತ್ತಿದೆ ಎಂದು ಸಿಒಎಐ ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಪತ್ರ ಬರೆದಿತ್ತು. ಇದರ ವಿರುದ್ಧ ರಿಲಯನ್ಸ್ ಜಿಯೊ ಕಟುವಾಗಿ ಟೀಕಿಸಿ ಕೋರ್ಟ್ ಮೆಟ್ಟಿಲೇರುವುದಾಗಿಯೂ ಎಚ್ಚರಿಸಿತ್ತು. ಈ ಪತ್ರ ಬರೆಯಲು ಸಿಒಎಐ ನಮ್ಮ ಅಭಿಪ್ರಾಯ ಕೇಳಿಲ್ಲ. ಇದು ಪ್ರಚಾರಕ್ಕಾಗಿ ಬರೆದ ಪತ್ರವಾಗಿದೆ. ಇದರಲ್ಲಿ ಎಳ್ಳಷ್ಟು ಸತ್ಯಾಂಶವಿಲ್ಲ ಎಂದು ಜಿಯೋ ಸಂಸ್ಥೆ ಸಿಒಎಐಗೆ ತಪಾರಕಿ ಹಾಕಿತ್ತು. ಈಗ ಎಲ್ಲ ಸದಸ್ಯ ಕಂಪನಿಗಳು ಒಗ್ಗೂಡಿ ದರ ಏರಿಕೆಗೆ ಮುಂದಾಗಿವೆ.