ಬೆಂಗಳೂರು: ಭಾರತದ ಅತ್ಯಂತ ಶ್ರೀಮಂತ ಉದ್ಯಮಿಯಾದ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಇಂದು 74ನೇ ಜನ್ಮ ದಿನಕ್ಕೆ ಕಾಲಿಟ್ಟಿದ್ದಾರೆ.
ಭಾರತೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಇನ್ಫಿ ಮುಖೇನ ಮೈಲಿಗಲ್ಲು ಸ್ಥಾಪಿಸಿ ವಿಶ್ವದ ಐಟಿ ಉದ್ಯಮವನ್ನೇ ಬೆಂಗಳೂರಿನತ್ತ ತಿರುಗಿ ನೋಡುವಂತಹ ಸಾಧನೆ ಮಾಡಿದವರು. ಕೋಟ್ಯಂತರ ಡಾಲರ್ನಷ್ಟು ಸಂಪತ್ತು ಇದ್ದರೂ ಸಂತನಂತಹ ಸರಳ ಜೀವನವನ್ನು ನಡೆಸುತ್ತಿದ್ದಾರೆ.
'ನಾಯಕರಾದವರು ಮಹತ್ವಾಕಾಂಕ್ಷೆ, ಆಶಾವಾದ, ಕಠಿಣ ಪರಿಶ್ರಮ, ವಿತ್ತೀಯ ಮತ್ತು ಇತರ ತ್ಯಾಗಗಳಲ್ಲಿ ಉದಾಹರಣೆಯಾಗಿ ಮುನ್ನಡೆಯಬೇಕು' ಎಂಬುದು ಅವರ ಉದ್ಯಮ ಮತ್ತು ಜೀವನದೃಷ್ಟಿಯ ಮಂತ್ರ. ಇಂತಹ ಆದರ್ಶನೀಯ ಸಿದ್ಧಾಂತ ಪಾಲಿಸಿಕೊಂಡು ಬರುತ್ತಿರುವ ನಾರಾಯಣ ಮೂರ್ತಿ ಅವರು ಒಮ್ಮೆ ಬಲ್ಗೇರಿಯಾದಲ್ಲಿ ಆಹಾರವಿಲ್ಲದೆ 72 ಗಂಟೆಗಳ ಕಾಲ ಜೈಲಿನಲ್ಲಿದ್ದರು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲದಿರಬಹುದು.
![Narayana Murthy](https://etvbharatimages.akamaized.net/etvbharat/prod-images/8491578_narayana.jpg)
ಈ ವರ್ಷದ ಜನವರಿಯಲ್ಲಿ ಬಾಂಬೆಯ ಐಐಟಿ ಆಯೋಜಿಸಿದ್ದ ಟೆಕ್ ಫೆಸ್ಟ್ನಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ವಿಡಿಯೋ ಲಿಂಕ್ ಮೂಲಕ, ಮೂರ್ತಿ ಅವರು 1974ರಲ್ಲಿ ಬಲ್ಗೇರಿಯಾದಲ್ಲಿ ಹೇಗೆ ಮತ್ತು ಏಕೆ ಜೈಲಿನಲ್ಲಿ ಇದ್ದರು ಎಂಬುದನ್ನು ಹಂಚಿಕೊಂಡಿದ್ದರು.
ಈಗಿನ ಸೆರ್ಬಿಯಾ ಮತ್ತು ಬಲ್ಗೇರಿಯಾ ನಡುವಿನ ಗಡಿ ಪಟ್ಟಣದ ನಿಸ್ ರೈಲಿನಲ್ಲಿ ನಡೆದ ಬದುಕಿನ ಕಹಿ ಘಟನೆ ಅದು. ಆ ಒಂದು ಘಟನೆ 'ಸಹಾನುಭೂತಿಯ ಬಂಡವಾಳಶಾಹಿ'ಯನ್ನಾಗಿ ಪರಿವರ್ತಿಸಿತು. ಐಟಿ ಕಂಪನಿ ಇನ್ಫೋಸಿಸ್ ಕಟ್ಟಲೂ ಅದು ಸಹ ಕಾರಣವಾಯಿತು. 1974ರಲ್ಲಿ ಮೂರ್ತಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣದಲ್ಲಿ ಇದ್ದಾಗ ಓರ್ವ ಹುಡುಗಿಯೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದರು. ಆದರೆ, ಅವಳು ಫ್ರೆಂಚ್ ಭಾಷೆ ಮಾತ್ರವೇ ಅರ್ಥ ಮಾಡಿಕೊಳ್ಳಬಲ್ಲವಳಾಗಿದ್ದಳು. ಇದರಿಂದ ಮತ್ತಷ್ಟು ತೊಂದರೆಯಲ್ಲಿ ಸಿಲುಕಿದ ಮೂರ್ತಿ ಕೊನೆಗೆ ಜೈಲು ಸೇರುವಂತಾಯಿತು. ಈ ಕುರಿತು ಅವರು ಖಾಸಗಿ ಚಾನಲ್ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ವಿವರವಾಗಿ ಹಂಚಿಕೊಂಡಿದ್ದರು.
![Narayana Murthy](https://etvbharatimages.akamaized.net/etvbharat/prod-images/8491578_nmurthy.jpg)
'ಆಗಿನ ಯುಗೊಸ್ಲಾವಿಯದಲ್ಲಿ ನಡೆದ ಅನಿರೀಕ್ಷಿತ ಘಟನೆಯಿಂದ ನನ್ನ ಜೀವನ ಒಂದು ನಿರ್ಣಾಯಕ ಹಂತಕ್ಕೆ ಬಂದಿತ್ತು. ನಿಯಾದಲ್ಲಿ ಒಬ್ಬ ಕರುಣಾಳು ನನ್ನನ್ನು ರಾತ್ರಿ 9:30ಕ್ಕೆ ರೈಲ್ವೆ ನಿಲ್ದಾಣದಲ್ಲಿ ಇಳಿಸಿದ. ಅಲ್ಲಿಂದ ನಾನು ಮರುದಿನ ಸೋಫಿಯಾಕ್ಕೆ ರೈಲು ಹತ್ತಿ ಹೋಗಬೇಕಾಗಿತ್ತು. ನನ್ನ ಬಳಿ ಯುಗೊಸ್ಲಾವಿಯನ್ ಕರೆನ್ಸಿ ಇರಲಿಲ್ಲ. ನಿಲ್ದಾಣದಲ್ಲಿ ಇರುವ ರೆಸ್ಟೋರೆಂಟ್ನವರು ನನಗೆ ಆಹಾರ ನೀಡಲು ನಿರಾಕರಿಸಿದರು. ಮರುದಿನ ಭಾನುವಾರ ಇದ್ದಿದ್ದರಿಂದ ಎಲ್ಲಾ ಬ್ಯಾಂಕ್ಗಳು ಬಾಗಿಲು ಹಾಕಿದ್ದವು. ನನ್ನಲ್ಲಿನ ಶಕ್ತಿಯನ್ನೆಲ್ಲ ಬಳಿಸಿಕೊಂಡು ನಾನು ನಿಲ್ದಾಣದಲ್ಲಿ ಮಲಗಿ ಆ ದಿನ ಕಳೆದಿದ್ದೆ. ಬಳಿಕ ರಾತ್ರಿ 8 ಗಂಟೆಗೆ ಸೋಫಿಯಾ ಎಕ್ಸ್ಪ್ರೆಸ್ ರೈಲು ಹತ್ತಿದೆ'.
ಸೋಫಿಯಾ ಎಕ್ಸ್ಪ್ರೆಸ್ ರೈಲಿನಲ್ಲಿ ನನ್ನ ಎದುರು ಹುಡುಗ ಮತ್ತು ಹುಡುಗಿ ಕುಳಿತಿದ್ದರು. ನನಗೆ ಇಂಗ್ಲಿಷ್, ಫ್ರೆಂಚ್ ಮತ್ತು ರಷ್ಯನ್ ಭಾಷೆ ಚೆನ್ನಾಗಿ ತಿಳಿದಿತ್ತು. ಅವರೊಂದಿಗೆ ಸಂಭಾಷಣೆ ನಡೆಸಲು ಪ್ರಯತ್ನಿಸಿದೆ. ಹುಡುಗ ಪ್ರತಿಕ್ರಿಯಿಸದಿದ್ದರೂ ಹುಡುಗಿಗೆ ಫ್ರೆಂಚ್ ಭಾಷೆ ಬರುತ್ತಿತ್ತು. ಅವಳು ದಯೆ ಮತ್ತು ಸ್ನೇಹಪರಳಾಗಿದ್ದಳು. ನಾವು ಮಾತನಾಡುತ್ತಿರುವಾಗ ಆ ಹುಡುಗ ಅಲ್ಲಿಯೇ ಹತ್ತಿರ ನಿಂತಿದ್ದ ಕೆಲವು ಪೊಲೀಸರ ಬಳಿ ಹೋಗಿ ಸ್ವಲ್ಪ ಹೊತ್ತು ಅವರಿಗೆ ಏನನ್ನೋ ಹೇಳಿದ. 'ನನ್ನ ಬ್ಯಾಗ್ ಅನ್ನು ದರೋಡೆ ಮಾಡಲಾಗುತ್ತಿದೆ ಎಂಬುದು ನನ್ನ ಗಮನಕ್ಕೆ ಬಂತು. ನನ್ನನ್ನು ಆ ರೈಲಿನಿಂದ ಹೊರಗೆ ಎಳೆದು 8x8 ಅಡಿ ಕೋಣೆಯಲ್ಲಿ ಕೂಡಿ ಹಾಕಿದರು. ನನ್ನ ಪಾಸ್ಪೋರ್ಟ್ ಮುಟ್ಟುಗೋಲು ಹಾಕಿಕೊಂಡರು. ಆ ಕೋಣೆಯ ಒಂದು ಮೂಲೆಯಲ್ಲಿ ಕೇವಲ ಶೌಚಾಲಯ ಮಾತ್ರ ಇತ್ತು. ಕೋಣೆಯ ನೆಲ ತಂಪಾಗಿ ಮತ್ತು ಕಠಿಣವಾಗಿತ್ತು. ಹಾಸಿಗೆ, ಕುರ್ಚಿ ಅಥವಾ ಟೇಬಲ್ ಇದ್ಯಾವುದೂ ಇರಲಿಲ್ಲ ಎಂದು ನಾರಾಯಣ ಮೂರ್ತಿ ಸ್ಮರಿಸಿಕೊಂಡರು.
ಜೈಲಿನಲ್ಲಿದ್ದ 72 ಗಂಟೆಗಳ ಅವಧಿಯಲ್ಲಿ ಮೂರ್ತಿ ಅವರಿಗೆ ತಿನ್ನಲು ಯಾವುದೇ ರೀತಿಯ ಆಹಾರ ಕೊಡಲಿಲ್ಲ. ನಾನು ಆ ರಾಜ್ಯದ ಅತಿಥಿ ಆಗಿದ್ದರಿಂದ ಅವರು ಬೆಳಗ್ಗೆ ಬಾಗಿಲು ತೆರೆದು ನನಗೆ ಸ್ವಲ್ಪ ಉಪಾಹಾರ ಕೊಡುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಅಂತಹ ಯಾವುದೇ ಘಟನೆ ನಡೆಯಲಿಲ್ಲ. ನಾನು ತಿನ್ನುವ ಭರವಸೆಯನ್ನೇ ಕಳೆದುಕೊಂಡೆ. ಮರುದಿನ ಬೆಳಗ್ಗೆ ಪೊಲೀಸರು ಪ್ಲಾಟ್ಫಾರ್ಮ್ಗೆ ಕರೆದೊಯ್ದು ನಿರ್ಗಮಿಸುತ್ತಿದ್ದ ಸರಕು ರೈಲಿನ ಗಾರ್ಡ್ನ ವಿಭಾಗಕ್ಕೆ ತಳ್ಳಿದರು. ಆ ಹೊತ್ತಿಗೆ, ಅವರಿಗೆ ಸತತ ಐದು ದಿನಗಳವರೆಗೆ ತಿನ್ನಲು ಅಥವಾ ಕುಡಿಯಲು ಏನೂ ಇರಲಿಲ್ಲ.
![Narayana Murthy](https://etvbharatimages.akamaized.net/etvbharat/prod-images/8491578_murthy.jpg)
ನೀರು ಮತ್ತು ಆಹಾರವಿಲ್ಲದೆ ಸುಮಾರು 120 ಗಂಟೆಗಳ ನಂತರ ಬಾಗಿಲು ತೆರೆಯಲಾಯಿತು. ಸರಕು ಸಾಗಣೆ ರೈಲಿನ ಕಾವಲುಗಾರರ ವಿಭಾಗದಲ್ಲಿ ಎಳೆದು ಹಾಕಲಾಯಿತು. ಯೋಚಿಸುವ ಸಾಮರ್ಥ್ಯವನ್ನು ಮೂರ್ತಿ ಅವರು ಕಳೆದುಕೊಂಡಿದ್ದರು. ಇಷ್ಟೆಲ್ಲ ಆದ ಬಳಿಕ ಓರ್ವ ಕಾವಲುಗಾರ 'ನೋಡಿ, ನೀವು ಭಾರತದಂತಹ ಸ್ನೇಹಪರವಾದ ದೇಶದಿಂದ ಬಂದವರು. ಆದ್ದರಿಂದ ನಾವು ನಿಮ್ಮನ್ನು ಹೋಗಲು ಬಿಡುತ್ತಿದ್ದೇವೆ. ಆದರೆ, ನೀವು ಇಸ್ತಾಂಬುಲ್ ತಲುಪಿದಾಗ ನಿಮ್ಮ ಪಾಸ್ಪೋರ್ಟ್ ಹಿಂದುರಿಗಿಸುತ್ತೇವೆ' ಎಂದರು.
ಈ ಘಟನೆ 'ದೃಢನಿಶ್ಚಯದ ಸಹಾನುಭೂತಿಯ ಬಂಡವಾಳಶಾಹಿ ಆಗುವಂತೆ' ತಮ್ಮನ್ನು ಹೇಗೆ ಪ್ರೇರೇಪಿಸಿತು ಎಂಬುದನ್ನು ಮೂರ್ತಿ ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ. ಒಂದು ದೇಶವನ್ನು ಸ್ನೇಹಿತರನ್ನಾಗಿ ಪರಿಗಣಿಸಿದರೆ, ಅವರು ಎಂದಿಗೂ ಕಮ್ಯುನಿಸ್ಟ್ ದೇಶದ ಭಾಗವಾಗಲು ಬಯಸುವುದಿಲ್ಲ ಎಂಬುದನ್ನು ಅರಿತುಕೊಂಡರು.
ಮೂರ್ತಿ ಅವರು ಪುಣೆಯ ಸಾಫ್ಟ್ರೋನಿಕ್ಸ್ ಎಂಬ ಕಂಪನಿಯ ಮೂಲಕ ಉದ್ಯಮಶೀಲತೆಗೆ ಧುಮುಕಿದರು. ಭವಿಷ್ಯದ ಯಾವುದೇ ಭರವಸೆ ಕಾಣದೆ ಇದ್ದಾಗ ತೆರದಷ್ಟು ವೇಗದಲ್ಲಿ ಬಾಗಿಲು ಮುಚ್ಚಿದರು. ಉದ್ಯಮಿಗಳಿಂದ ಕಾರ್ಯಸಾಧ್ಯವಾಗುವಂತಹ ಉದ್ಯೋಗಗಳ ಸೃಷ್ಟಿಯ ಮೂಲಕವೇ ಒಂದು ದೇಶವನ್ನು ಅಭಿವೃದ್ಧಿಯ ಪಥದತ್ತ ಕರೆದೊಯ್ಯಬಹುದು ಎಂಬುದನ್ನು ಮನವರಿಕೆ ಮಾಡಿಕೊಂಡು ಆ ಮಾರ್ಗದಲ್ಲಿ ಇನ್ಫೋಸಿಸ್ನಂತಹ ದೈತ್ಯ ಐಟಿ ಸಂಸ್ಥೆ ಕಟ್ಟಿ, ಬೆಳೆಸಿ ಪೋಷಿಸಿದರು.
2019ರಲ್ಲಿ ಫೋರ್ಬ್ಸ್ ಹೊರಡಿಸಿದ ಭಾರತೀಯ 10 ಐಟಿ ಉದ್ಯಮದ ಶತ ಕೋಟ್ಯಾಧಿಪತಿಗಳ ಸಾಲಿನಲ್ಲಿ ಇನ್ಫಿ ನಾರಾಯಣ ಮೂರ್ತಿ 3ನೇ ಸ್ಥಾನದಲ್ಲಿದ್ದಾರೆ. ಶಿವ ನಾದರ್ ಮತ್ತು ಅಜಿಂ ಪ್ರೇಮ್ಜೀ ಬಳಿಕ ಈ ಸ್ಥಾನ ಅಲಂಕರಿಸಿದ್ದಾರೆ. ಮೂರ್ತಿಯವರು 2.47 ಬಿಲಿಯನ್ ಡಾಲರ್ನಷ್ಟು (18,552 ಕೋಟಿ ರೂ.) ಸಂಪತ್ತನ್ನು ಹೊಂದಿದ್ದಾರೆ.