ಇಸ್ಲಾಮಾಬಾದ್: ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ಯಾವುದೇ ವ್ಯಾಪಾರವಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಕ್ಯಾಬಿನೆಟ್ ಸದಸ್ಯರೊಂದಿಗೆ ಚರ್ಚಿಸಿದ ನಂತರ ಇಮ್ರಾನ್ ಖಾನ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಇಲ್ಲಿನ ಪತ್ರಿಕೆ 'ಡಾನ್' ವರದಿ ಪ್ರಕಟಿಸಿದೆ. ಭಾರತದಿಂದ ಸಕ್ಕರೆ ಮತ್ತು ಹತ್ತಿ ಆಮದು ಮಾಡಿಕೊಳ್ಳುವ ನಿರ್ಧಾರವನ್ನು ಪಾಕಿಸ್ತಾನ ಹಿಂಪಡೆದಿದೆ.
ಪಾಕಿಸ್ತಾನವು ಹತ್ತಿ ಮತ್ತು ಸಕ್ಕರೆಯ ತೀವ್ರ ಕೊರತೆ ಎದುರಿಸುತ್ತಿದೆ. ಇದರೊಂದಿಗೆ ಭಾರತದಿಂದ ಆಮದು ಮಾಡಿಕೊಳ್ಳಲು ನಿರ್ಧರಿಸಲಾಯಿತು. ಬುಧವಾರ ಪಾಕಿಸ್ತಾನದ ಹಣಕಾಸು ಸಚಿವ ಹಮ್ಮದ್ ಅಜರ್ ನಿಷೇಧ ತೆಗೆದುಹಾಕುವುದಾಗಿ ಘೋಷಿಸಿದ್ದರು. ಪಾಕ್ ಕ್ಯಾಬಿನೆಟ್ ಒಂದು ದಿನದೊಳಗೆ ವಿರುದ್ಧ ನಿರ್ಧಾರ ತೆಗೆದುಕೊಂಡಿದೆ.
ಭಾರತದ ಜೊತೆ ಯಾವುದೇ ವ್ಯಾಪಾರ ನಡೆಯುವುದಿಲ್ಲ ಎಂದು ದೇಶದ ಮಾನವ ಹಕ್ಕುಗಳ ಸಚಿವ ಶಿರಿನ್ ಮಜಾರಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಹೀರೊ ಮೊಟೊಕಾರ್ಪ್ ಸಂಸ್ಥಾಪಕ ಪತ್ನಿ ಸಂತೋಷ್ ಮುಂಜಾಲ್ ಪತ್ನಿ ನಿಧನ
ಆಗಸ್ಟ್ 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆ ಮುಕ್ತಾಯಗೊಳಿಸಿದ ನಂತರ ಪಾಕ್ ಭಾರತದೊಂದಿಗಿನ ವ್ಯಾಪಾರ ಸಂಬಂಧವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.
ಡಾನ್ ಪ್ರಕಾರ, ಇಮ್ರಾನ್ ಖಾನ್ ಶುಕ್ರವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಇದರ ಪರಿಣಾಮಗಳ ಬಗ್ಗೆ ಚರ್ಚಿಸಿದರು. ವಿರಳ ಸರಕುಗಳನ್ನು ಆಮದು ಮಾಡಿಕೊಳ್ಳಲು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರ್ಥಿಕ ಸಮನ್ವಯ ಸಮಿತಿಯ (ಇಸಿಸಿ) ಶಿಫಾರಸುಗಳ ಪ್ರಕಾರ ಭಾರತದಿಂದ ಹತ್ತಿ ಮತ್ತು ಸಕ್ಕರೆ ಆಮದು ಮಾಡುವ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಬದಿಗಿಡಬೇಕು ಎಂದರು.
ಜಮ್ಮು ಮತ್ತು ಕಾಶ್ಮೀರ ಸ್ವಾಯತ್ತತೆಯನ್ನು ರದ್ದುಪಡಿಸುವಂತಹ ಕ್ರಮಗಳನ್ನು ಹಿಂತೆಗೆದುಕೊಳ್ಳುವವರೆಗೂ ಭಾರತದೊಂದಿಗೆ ಸಾಮಾನ್ಯ ಸಂಬಂಧಗಳು ಮುಂದುವರಿಯುವುದಿಲ್ಲ ಎಂದು ಇಮ್ರಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಭಾರತ ಯಾವಾಗಲೂ ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಬಯಸಿದೆ. ಆದರೆ, ಅದು ಆ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಮಟ್ಟಹಾಕಲು ಬಯಸುತ್ತಿಲ್ಲ. ಇದುವರೆಗೂ ಪಾಕ್ ಆ ದಿಕ್ಕಿನಲ್ಲಿ ಬಲವಾದ ಕ್ರಮಗಳನ್ನು ಕೈಗೊಂಡಿಲ್ಲ. ಉಭಯ ದೇಶಗಳ ನಡುವೆ ಹೊಂದಾಣಿಕೆಯ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನಕ್ಕೆ ಇದೆ ಎಂದು ಭಾರತ ಸ್ಪಷ್ಟಪಡಿಸಿದೆ.