ಬೆಂಗಳೂರು: ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಹಾಗೂ ವೃದ್ಧಾಪ್ಯ ವೇತನ ಪಡೆದುಕೊಳ್ಳಲು ಹಿರಿಯ ನಾಗರಿಕರು ಬೇರೆ - ಬೇರೆ ಕಚೇರಿಗಳು ಅಥವಾ ಬ್ಯಾಂಕ್ಗಳಿಗೆ ಭೇಟಿ ಕೊಡಬೇಕಾಗಿಲ್ಲ ಎಂಬ ಬಗ್ಗೆ ಖಚಿತ ಪ್ರಮಾಣಪತ್ರ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಸಂಧ್ಯಾ ಸುರಕ್ಷಾ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಯಡಿ ಹಿರಿಯ ನಾಗರಿಕರಿಗೆ ಸಕಾಲಕ್ಕೆ ಪಿಂಚಣಿ ಸಿಗುತ್ತಿಲ್ಲ ಎಂದು ಆಕ್ಷೇಪಿಸಿ ಅಖಿಲ ಕರ್ನಾಟಕ ವಯೋವೃದ್ಧರ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ, ಸರ್ಕಾರದ ಪರ ವಕೀಲರು ವಾದಿಸಿ, ನ್ಯಾಯಾಲಯ ಈ ಹಿಂದೆ ನೀಡಿದ್ದ ಆದೇಶಗಳ ಅನುಪಾಲನಾ ವರದಿಯನ್ನು ಸರ್ಕಾರದ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು. ಹಿರಿಯ ನಾಗರಿಕರಿಗೆ ಜೀವಿತ ಪ್ರಮಾಣಪತ್ರ ಕೇಳುತ್ತಿಲ್ಲ. 2021ರ ಮೇ ವರೆಗೆ ಎಲ್ಲ ಹಿರಿಯ ನಾಗರಿಕರಿಗೆ ಪಿಂಚಣಿ ಮತ್ತು ವೃದ್ಧಾಪ್ಯ ವೇತನ ಪಾವತಿಸಲಾಗಿದೆ. ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯಲು ಹಿರಿಯ ನಾಗರಿಕರು ಒಂದು ಕಚೇರಿಯಿಂದ ಮೊತ್ತೊಂದು ಕಚೇರಿಗೆ ಅಥವಾ ಬ್ಯಾಂಕುಗಳಿಗೆ ಭೇಟಿ ಕೊಡುವಂತಿಲ್ಲ ಎಂದು ವಿವರಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯಲು ಹಿರಿಯ ನಾಗರಿಕರು ಒಂದು ಕಚೇರಿಯಿಂದ ಮೊತ್ತೊಂದು ಕಚೇರಿಗೆ ಅಥವಾ ಬ್ಯಾಂಕುಗಳಿಗೆ ಭೇಟಿ ಕೊಡುವಂತಿಲ್ಲ ಎಂಬ ಬಗ್ಗೆ ಖಚಿತ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಜುಲೈ 28ಕ್ಕೆ ಮುಂದೂಡಿತು.