ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಕುಮಾರ ಪರ್ವತದ ತಪ್ಪಲಿನ ಬಾಳುಗೋಡು ಮೀಸಲು ಅರಣ್ಯಕ್ಕೆ ಸೇರಿದ ಕೋಟಿ ಝರಿ ಎಂಬಲ್ಲಿ ಗಾಯಗೊಂಡ ಕಾಡಾನೆ ಪತ್ತೆಯಾಗಿದೆ.
ಈ ಕಾಡಾನೆ ಮುಂಗಾಲು ಊರಲೂ ಆಗದೇ ಯಾತನೆ ಅನುಭವಿಸುತ್ತಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಬಾಳುಗೋಡು, ಪದಕ, ಮಿತ್ತಡ್ಕ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಈ ಕಾಡಾನೆ ತಿರುಗಾಡುತ್ತಿದೆ ಎಂದು ಅಲ್ಲಿನ ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ಆನೆ ಇರುವ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದರು. ಗುರುವಾರ ನಾಗರಹೊಳೆಯಿಂದ ತಜ್ಞ ವೈದ್ಯರು ಆಗಮಿಸಿ ಗಾಯಗೊಂಡಿರುವ ಈ ಕಾಡಾನೆಗೆ ಚಿಕಿತ್ಸೆ ನೀಡಲಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಹೇಳಿದ್ದಾರೆ.