ಬೆಂಗಳೂರು: ಲೋಕಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ರಾಜ್ಯ ಬಿಜೆಪಿ ಶಾಸಕಾಂಗ ಸಭೆ ನಡೆಯುತ್ತದೆ. ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟ ಕೈಗೊಳ್ಳುವ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಬರ ಅಧ್ಯಯನ ಪ್ರವಾಸಕ್ಕೆ ತಂಡ ಕಳುಹಿಸುವ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ. ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ, ಬಿಜೆಪಿಯ ಶಾಸಕರು ವಿಧಾನ ಪರಿಷತ್ ಸದಸ್ಯರು ಹಾಗೂ ನೂತನವಾಗಿ ಆಯ್ಕೆಯಾಗಿರುವ ಬಿಜೆಪಿ ಸಂಸದರು ಭಾಗಿಯಾಗಿದ್ದಾರೆ.
ಜಿಂದಾಲ್ಗೆ ಭೂಮಿ ಮಾರಾಟ ಮಾಡುವ ನಿರ್ಣಯ ಕೈಗೊಂಡ ರಾಜ್ಯದ ದೋಸ್ತಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ರೂಪುರೇಷೆಗಳ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ಬರಪೀಡಿತ ಪ್ರದೇಶಗಳ ಪ್ರವಾಸದ ಬದಲು ಗ್ರಾಮ ವಾಸ್ತವ್ಯ ಮಾಡಲು ಹೊರಟ ಸಿಎಂ ವಿರುದ್ಧ ಹೋರಾಟ ನಡೆಸುವ ಹಾಗೂ ಬರ ಅಧ್ಯಯನಕ್ಕೆ ಬಿಜೆಪಿಯ ತಂಡಗಳು ತೆರಳುವ ಕುರಿತು ಚರ್ಚೆ ನಡೆಸಲಾಗುತ್ತಿದೆ.
ಲೋಕಸಭಾ ಚುನಾವಣೆ ಯಶಸ್ಸು ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯ ಹಿನ್ನೆಡೆ ಬಗ್ಗೆಯೂ ಶಾಸಕಾಂಗ ಸಭೆಯಲ್ಲಿ ಪರಾಮರ್ಶೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಶಾಸಕಾಂಗ ಸಭೆಗೆ 10 ಸದಸ್ಯರು ಗೈರು :
ಬಿಜೆಪಿ ಶಾಸಕಾಂಗ ಸಭೆಗೆ 10 ಸದಸ್ಯರು ಗೈರಾಗಿದ್ದಾರೆ. ವಿವಿಧ ಕಾರಣಗಳ ಹಿನ್ನೆಲೆ ಅನುಮತಿ ಪಡೆದು ಗೈರಾಗಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಗೈರು ಹಾಜರಾದ ಶಾಸಕರು:
ಗೂಳಿಹಟ್ಟಿ ಶೇಖರ್-ಹೊಸದುರ್ಗ, ವಿ.ಸೋಮಣ್ಣ-ಗೋವಿಂದರಾಜನಗರ, ವಿ.ಶ್ರೀನಿವಾಸ ಪ್ರಸಾದ್-ಚಾಮರಾಜನಗರ, ಸಂಸದ ಅನಂತಕುಮಾರ್ ಹೆಗಡೆ-ಉತ್ತರ ಕನ್ನಡ, ಸಂಸದ ರಮೇಶ್ ಜಿಗಜಿಣಗಿ-ವಿಜಯಪುರ, ರಸಗೊಬ್ಬರ ಸಚಿವ ಪ್ರಹ್ಲಾದ್ ಜೋಶಿ-ಹುಬ್ಬಳ್ಳಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್-, ಉಮೇಶ್ ಕತ್ತಿ-ಚಿಕ್ಕೋಡಿ, ಬಾಲಚಂದ್ರ ಜಾರಕಿಹೊಳಿ-ಅರಬಾವಿ, ಎಂ.ಕೃಷ್ಣಪ್ಪ-ಬೆಂಗಳೂರು ದಕ್ಷಿಣ.