ಹಾಸನ : ಹಿಂದಿನ ಸರ್ಕಾರದ ಅವಧಿಯಲ್ಲಿ ಜೆಡಿಎಸ್ ನಾಯಕರು ನಗರದ ಅಭಿವೃದ್ಧಿ ವಿಚಾರದಲ್ಲಿ ಎಡವಿದ್ದಾರೆ. ಸಾವಿರಾರು ಕೋಟಿ ಹಣ ತಂದರೂ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಂಖಡ ದೇವರಾಜೇಗೌಡ ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಕಾಬಿಟ್ಟಿ ಕಾಮಗಾರಿ ಮಾಡುವ ನೆಪದಲ್ಲಿ ನಗರವನ್ನು ಕಿಷ್ಕಿಂದೆ ಮಾಡಿದ್ದಾರೆ. ಸುಸಜ್ಜಿತವಾದ ಹಳೇ ಕಟ್ಟಡ ಕೆಡವಿ ನೂತನ ಕಟ್ಟಡ ಮಾಡೋದು ಯಾವ ರೀತಿ ಅಭಿವೃದ್ಧಿ? ಹಲವು ದಶಕದ ಇತಿಹಾಸ ಹೊಂದಿರುವ ನಗರದ ಬೃಹತ್ ಗಂಧದ ಕೋಟಿ ಆವರಣದಲ್ಲಿ ಕಟ್ಟಡ ನಿರ್ಮಾಣ ಮಾಡಲು ನೂರಾರು ಮರಗಳ ಮಾರಣ ಹೋಮ ಮಾಡಿದ್ದಾರೆ ಎಂದು ದೂರಿದರು.
ಹಿಂದೆ ಉಸ್ತುವಾರಿ ಸಚಿವರಾಗಿದ್ದ ಜೆಡಿಎಸ್ನವರು ತಮ್ಮ ಸ್ವಾರ್ಥಕ್ಕೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡಿದ್ದಾರೆ. ಇದು ಇಲ್ಲಿನ ಜನರಿಗೆ ಮಾಡಿದ ಅನ್ಯಾಯ ಅನುದಾನ ತಂದರೂ ಸರಿಯಾದ ಉಪಯೋಗವಾಗಿಲ್ಲ, ಸಾವಿರಾರು ಕೋಟಿ ಹಣ ಸುರಿದರು ನಗರದ ಬಹುತೇಕ ರಸ್ತೆ ಹದಗೆಟ್ಟಿದೆ ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂದು ದೂರಿದರು.
ಸ್ಥಳೀಯ ಶಾಸಕರಾದ ಪ್ರೀತಂಗೌಡ ಅವರು ಔಟರ್ ರಿಂಗ್ ರೋಡ್ ಅಭಿವೃದ್ಧಿ ಮಾಡುವ ಮಾತನಾಡಿದ್ದಾರೆ. ಆದರೆ, ಈಗಿರುವ ರಿಂಗ್ ರಸ್ತೆಯೇ ಅಭಿವೃದ್ಧಿಯಾಗಿಲ್ಲ ನಗರದ ಹಲವು ರಸ್ತೆಗಳು ಹದಗೆಟ್ಟಿದೆ. ಅದನ್ನೇ ಅಭಿವೃದ್ಧಿ ಮಾಡಿದರೆ ಒಳಿತು. ಇನ್ನೊಂದು ರಿಂಗ್ ರಸ್ತೆಯಿಂದ ಯಾರಿಗೂ ಅನುಕೂಲವಾಗದು ಸಾರ್ವಜನಿಕ ಉಪಯೋಗ ಕಮ್ಮಿ, ಇದರಿಂದ ಜೆಡಿಎಸ್ ನಾಯಕರಿಗೆ ಹೆಚ್ಚು ಅನುಕೂಲ ಅಷ್ಟೆ. ಇಂತಹ ಯೋಜನೆ ಕೈಬಿಟ್ಟು ಬೇರೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್, ಮಹೇಂದ್ರ, ರಿಜ್ವಾನ್, ಕೀರ್ತಿಕುಮಾರ್, ದೇವಪ್ಪ ಮಲ್ಲಿಗೆವಾಳು ಇದ್ದರು.