ಪುಣೆ: ಹುಟ್ಟು ಹಬ್ಬ ಆಚರಣೆಯನ್ನು ದುಬೈನಲ್ಲಿ ಮಾಡಬೇಕು ಎಂಬ ಕನಸನ್ನು ನಿರಾಸೆ ಮಾಡಿದ ಹಿನ್ನಲೆ ಗಂಡನ ಮುಖಕ್ಕೆ ಹೆಂಡತಿ ಗುದ್ದಿರುವ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಹೆಂಡತಿ ಬಲವಾಗಿ ಮೂಗಿಗೆ ಗುದ್ದಿದ ಹಿನ್ನಲೆ ರಕ್ತ ಸೋರಿ ಗಂಡ ಅಸುನೀಗಿರುವ ದುರ್ಘಟನೆ ನಡೆದಿದೆ.
ಪುಣೆಯ ವನವಡಿ ಪ್ರದೇಶದಲ್ಲಿ ವಾಸವಾಗಿದ್ದ ನಿಖಿಲ್ ಖನ್ನಾ (36) ಸಾವನ್ನಪ್ಪಿದ ವ್ಯಕ್ತಿ. ಕನ್ಸ್ಟ್ರಕ್ಷನ್ ಉದ್ಯಮದಲ್ಲಿದ್ದ ಇವರು ರೇಣುಕಾ(38) ಎಂಬುವವರನ್ನು ಆರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.
ಸೆಪ್ಟೆಂಬರ್ 18ರಂದು ರೇಣುಕಾ ಹುಟ್ಟು ಹಬ್ಬ ಇತ್ತು. ಇದನ್ನು ದುಬೈನಲ್ಲಿ ಆಚರಿಸುವ ಬಯಕೆ ಪತ್ನಿಯದ್ದಾಗಿತ್ತು. ಆದರೆ, ಇದಕ್ಕೆ ಗಂಡ ನಿರಾಕರಿಸಿದ್ದ. ಇದರ ಬೆನ್ನಲ್ಲೆ ನವೆಂಬರ್ 5ರಂದು ಇವರ ಮದುವೆ ವಾರ್ಷಿಕೋತ್ಸವ ಕೂಡ ಇತ್ತು. ಈ ವೇಳೆ ಕೂಡ ಗಂಡ ಉತ್ತಮ ಉಡುಗೊರೆ ನೀಡಿಲ್ಲ ಎಂದು ಮಹಿಳೆ ಬೇಸರಿಸಿಕೊಂಡಿದ್ದರು.
ಇದರ ಬೆನ್ನಲ್ಲೆ ಮಹಿಳೆ ಸಂಬಂಧಿಕರ ಹುಟ್ಟು ಹಬ್ಬ ಆಚರಣೆಗೆ ದೆಹಲಿಗೆ ಹೋಗುವುದಾಗಿ ತಿಳಿಸಿದ್ದರು. ಆದರೆ, ಗಂಡ ಇದಕ್ಕೆ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಎಲ್ಲಾ ಘಟನೆಗಳಿಂದ ಬೇಸರಗೊಂಡಿದ್ದ ಮಹಿಳೆ ಶುಕ್ರವಾರ ರಾತ್ರಿ ಕುಪಿತಗೊಂಡು ಗಂಡನೊಂದಿಗೆ ವಾಗ್ವಾದ ನಡೆಸಿದ್ದಾಳೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಸಿಟ್ಟಿನಿಂದ ರೇಣುಕಾ ಗಂಡನ ಮುಖಕ್ಕೆ ಮುಖಕ್ಕೆ ಗುದ್ದಿದ್ದಾಳೆ. ಬಲವಾಗಿ ಮೂಗಿಗೆ ಪೆಟ್ಟು ಬಿದ್ದಿದ್ದು, ನಿಖಿಲ್ ಖನ್ನಾ ಮೂಗಿನಿಂದ ರಕ್ತ ಸೋರಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ನೆರೆ ಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಕ್ಷಣಕ್ಕೆ ನಿಖಿಲ್ ಅವರನ್ನು ಸಸೂನ್ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಈ ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಘಟನೆ ವೇಳೆ ಮಹಿಳೆಯೇ ಮೊದಲು ಹಲ್ಲೆ ನಡೆಸಿದರಾ ಅಥವಾ ಇತರ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆಯೇ ಎಂಬುದರ ಕುರಿತು ವಿಚಾರಣೆ ನಡೆಸಲಾಗುವುದು. ಇದರ ಜೊತೆಗೆ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ವರದಿಗೆ ಕಾಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸದ್ಯ ಮಹಿಳೆಯನ್ನು ವಶಕ್ಕೆ ಪಡೆದಿದ್ದು, ಐಪಿಸಿ 302 (ಕೊಲೆ) ಪ್ರಕರಣದ ಅಡಿ ಪ್ರಕರಣ ದಾಖಲಿಸಲಾಗಿದೆ. (ಎಎನ್ಐ)
ಇದನ್ನೂ ಓದಿ: ಮಗು ಹೆರಲು ಪತಿಗೆ ಜಾಮೀನು ನೀಡುವಂತೆ ನ್ಯಾಯಾಲಯದ ಮೊರೆ ಹೋದ ಮಹಿಳೆ!