ನವದೆಹಲಿ: ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ನ ಆದೇಶ ಪಾಲಿಸಿದ್ದು, ಮೇ 4ರಂದು ಸುಮಾರು 700 ಮೆಟ್ರಿಕ್ ಟನ್ ಆಮ್ಲಜನಕವನ್ನು ರಾಷ್ಟ್ರ ರಾಜಧಾನಿ ದೆಹಲಿಗೆ ಪೂರೈಸಿದೆ.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಆಮ್ಲಜನಕ ಪೂರೈಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದೆ. ಈ ಮೂಲಕ ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ.
ಕೆಲವು ದಿನಗಳ ಹಿಂದೆ ದೆಹಲಿಯಲ್ಲಿನ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದರೆ, ಕೇಂದ್ರ ಸರ್ಕಾರದ ಅಧಿಕಾರಿಗಳು ಹೈಕೋರ್ಟ್ ನಿರ್ದೇಶನವನ್ನು ಪಾಲನೆ ಮಾಡಿರಲಿಲ್ಲ.
ಇದನ್ನೂ ಓದಿ : ತರಕಾರಿ ಬುಟ್ಟಿಗೆ ಬೂಟುಕಾಲಿಂದ ಒದ್ದು ಪೊಲೀಸ್ ಅಧಿಕಾರಿ ದರ್ಪ - ವಿಡಿಯೋ ನೋಡಿ
ಕೇಂದ್ರ ಸರ್ಕಾರಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ನ್ಯಾಯಾಂಗ ನಿಂದನೆ ಆರೋಪದ ಹಿನ್ನೆಲೆ ವಿಚಾರಣೆ ನಡೆಸುತ್ತಿದ್ದು, ಈ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿ, ಆಕ್ಸಿಜನ್ ಪೂರೈಸದಿರಲು ಕಾರಣ ಏನು ಎಂದು ತಿಳಿಸಬೇಕೆಂದು ಗುರುವಾರ ಬೆಳಗ್ಗೆವರೆಗೆ ಅವಕಾಶ ನೀಡಿತ್ತು.
ಇದಕ್ಕೆ ಗುರುವಾರ ಬೆಳಗ್ಗೆ ಉತ್ತರ ನೀಡಿದ ಕೇಂದ್ರ ಸರ್ಕಾರ ಮೇ 4ರಂದು ಅಂದರೆ ಬುಧವಾರ ಸುಮಾರು 700 ಮೆಟ್ರಿಕ್ ಟನ್ನಷ್ಟು ಆಮ್ಲಜನಕವನ್ನು ದೆಹಲಿಗೆ ಪೂರೈಸಲಾಗಿದೆ ಎಂದು ಉತ್ತರ ನೀಡಿದೆ.