ನಾಸಿಕ್(ಮಹಾರಾಷ್ಟ್ರ) : ಇಲ್ಲಿನ ಪ್ರಸಿದ್ಧ ತೀರ್ಥ ಕ್ಷೇತ್ರ ಹಾಗೂ ಪವಿತ್ರ ಜ್ಯೋತಿರ್ಲಿಂಗಳಲ್ಲಿ ಒಂದಾದ ತ್ರಯಂಬಕೇಶ್ವರ ದೇವಾಲಯಕ್ಕೆ ಯಾರೂ ಬಲವಂತವಾಗಿ ಪ್ರವೇಶಿಸಲು ಯತ್ನಿಸಿಲ್ಲ ಎಂದು ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಥಾಣೆಯಲ್ಲಿರುವ ತ್ರಿಯಂಬಕೇಶ್ವರ ದೇವಾಲಯದ ಶಿಷ್ಟಾಚಾರಕ್ಕೆ ವಿರುದ್ಧವಾಗಿ ಒಂದು ಸಮುದಾಯದ ಕೆಲ ಜನರು ದೇವಾಲಯದ ಒಳಗೆ ಪ್ರವೇಶಿಸಲು ಯತ್ನಿಸಿದ್ದು, ಈ ವೇಳೆ ಭದ್ರತಾ ಸಿಬ್ಬಂದಿಗಳು ಅವರನ್ನು ತಡೆದಿದ್ದರು. ಈ ಸಂಬಂಧ ನಾಸಿಕ್ನಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.
ನಾಸಿಕ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಸಂಜಯ್ ರಾವತ್, ತ್ರಯಂಬಕೇಶ್ವರ ದೇವಾಲಯದ ಆವರಣದಲ್ಲಿ ಯಾವುದೇ ತಪ್ಪುಗಳು ನಡೆದಿಲ್ಲ. ಈ ಬಗ್ಗೆ ನಾನು ಈಗಾಗಲೇ ವಿಚಾರಿಸಿದ್ದೇನೆ. ಇಲ್ಲಿನ ದೇವಾಲಯದ ಆವರಣದಲ್ಲಿ ನಡೆಯುವ ದೇವರ ಮೆರವಣಿಗೆಯಲ್ಲಿ ಧೂಪದ್ರವ್ಯವನ್ನು ಹಾಕಲಾಗುತ್ತದೆ. ಈ ವೇಳೆ ದೇವಾಲಯದ ಹೊರಗೆ ಒಂದು ಸಮುದಾಯವು ಧೂಪವನ್ನು ಹಾಕಿ ಬಳಿಕ ಅಲ್ಲಿಂದಲೇ ತೆರಳಿದ್ದಾರೆ. ಯಾರೂ ಕೂಡ ಬಲವಂತವಾಗಿ ದೇವಾಲಯದ ಒಳಗೆ ಪ್ರವೇಶಿಸಲು ಯತ್ನಿಸಿಲ್ಲ ಎಂದು ಹೇಳಿದರು.
ಪ್ರಸ್ತುತ ಮಹಾರಾಷ್ಟ್ರದಲ್ಲಿ ಹಿಂದುತ್ವದ ಹೆಸರಿನಲ್ಲಿ ಗುಂಪುಗಳನ್ನು ಕಟ್ಟಿಕೊಂಡು ಶಾಂತಿ ಸುವ್ಯವಸ್ಥೆಯನ್ನು ಕದಡುವ ಕೆಲಸ ಆಗುತ್ತಿದೆ. ನಮ್ಮಲ್ಲಿರುವಷ್ಟು ಹಿಂದುತ್ವ ದೇಶದ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ತ್ರಿಯಂಬಕೇಶ್ವರ ನಮ್ಮ ನಂಬಿಕೆಯ ಮತ್ತು ಭಕ್ತಿಯ ಸಂಕೇತ. ತ್ರಯಂಬಕೇಶ್ವರದಲ್ಲಿ ಇಂತಹ ಯಾವುದೇ ಘಟನೆಗಳು ನಡೆದಿರುವುದು ನನಗೆ ನೆನಪಿಲ್ಲ ಎಂದು ಹೇಳಿದರು.