ಬಿಜಾಪುರ( ಛತ್ತೀಸ್ಗಢ): ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ದೊಡ್ಡ ನಿರ್ಲಕ್ಷ್ಯವೊಂದು ಬೆಳಕಿಗೆ ಬಂದಿದೆ. ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದ ಮಹಿಳೆಯ ಶವವನ್ನು ಇಲಿಗಳು ಕಚ್ಚಿವೆ. ನಗರದ ಖ್ಯಾತ ಜವಳಿ ಉದ್ಯಮಿ ದಿಲೀಪ್ ಚಂದಕ್ ಅವರ ತಾಯಿಗೆ ಸಂಬಂಧಿಸಿದ ವಿಚಾರ ಇದಾಗಿದೆ. ಶವಾಗಾರದಲ್ಲಿ ಇರಿಸಿದ್ದ ಮೃತದೇಹವನ್ನು ಇಲಿಗಳು ಕಚ್ಚಿ ತಿಂದಿವೆ ಎಂಬ ವಿಚಾರ ತಿಳಿದ ಜಿಲ್ಲಾಧಿಕಾರಿ ಅವರು ವಾರ್ಡ್ ಬಾಯ್ನನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ
ಶವಾಗಾರದಲ್ಲಿ ಇರಿಸಿದ ಶವವನ್ನು ಕಚ್ಚಿ ತಿಂದಿರುವ ವಿಚಾರ ಜಿಲ್ಲಾದ್ಯಂತ ಸದ್ದು ಮಾಡಿದೆ. ಈ ವಿಷಯವನ್ನು ಅಲ್ಲಿನ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಅಂದ ಹಾಗೆ ಈ ಘಟನೆ ನಡೆದಿರುವುದು ಬಿಜಾಪುರದ ಜಿಲ್ಲಾ ಆಸ್ಪತ್ರೆಯಲ್ಲಿ. ಜಿಲ್ಲೆಯ ಬಟ್ಟೆ ವ್ಯಾಪಾರಿ ದಿಲೀಪ್ ಚಂದಕ್ ಅವರ ತಾಯಿ ಸರಸ್ವತಿ ಚಂದಕ್ ಸೋಮವಾರ ನಿಧನರಾಗಿದ್ದರು. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿ ಆಗದೇ ನಿಧನರಾಗಿದ್ದರು. ಹೀಗಾಗಿ ಅವರ ಮೃತದೇಹವನ್ನ ಫೋಸ್ಟ್ ಮಾರ್ಟಂಗೆ ರವಾನಿಸಲಾಗಿತ್ತು. ಅದಕ್ಕಾಗಿಯೇ ಅದನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಎಲ್ಲ ಪರೀಕ್ಷಗಳ ಬಳಿಕ ಕುಟುಂಬಸ್ಥರು, ಮೃತದೇಹವನ್ನು ತೆಗೆದುಕೊಳ್ಳಲು ಆಸ್ಪತ್ರೆಗೆ ಆಗಮಿಸಿದ್ದರು. ಆಗ ಸರಸ್ವತಿ ಚಂದಕ್ ಅವರ ಮೃತದೇಹವನ್ನು ಇಲಿಗಳು ಕಚ್ಚಿರುವುದು ಗಮನಕ್ಕೆ ಬಂದಿದೆ. ಇದು ಕುಟುಂಬಸ್ಥರನ್ನು ಆಘಾತಕ್ಕೂ ಒಳಗಾಗುವಂತೆ ಮಾಡಿತ್ತು. ಮೃತದೇಹದ ಸ್ಥಿತಿ ಕಂಡು ಕುಟುಂಬಸ್ಥರು ಕಣ್ಣೀರಿಟ್ಟದ್ದೂ ಆಯಿತು.
ಮೃತ ದೇಹ ಕಚ್ಚಿದ ಇಲಿಗಳು: ವಾಸ್ತವವಾಗಿ, ಮೃತ ದೇಹವನ್ನು ಇಲಿಗಳು ಕೆಟ್ಟದಾಗಿ ಕಚ್ಚಿದ್ದವು. ಕೈಕಾಲು ಸೇರಿದಂತೆ ದೇಹದ ಹಲವು ಭಾಗಗಳಿಗೆ ಹಾನಿ ಆಗಿತ್ತು. ಮೃತದೇಹದ ಸ್ಥಿತಿ ಕಂಡು ಕುಟುಂಬಸ್ಥರು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಕುಟುಂಬ ಸದಸ್ಯರು ಹೇಳುವ ಪ್ರಕಾರ ಶವಾಗಾರದ ಡೀಪ್ ಫ್ರೀಜರ್ ಕೂಡಾ ಕೆಲಸ ಮಾಡುತ್ತಿಲ್ಲ ಎನ್ನಲಾಗಿದೆ.
ಆಸ್ಪತ್ರೆ ವಾರ್ಡ್ ಬಾಯ್ ಅಮಾನತು: ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಜಿಲ್ಲಾಧಿಕಾರಿ ರಾಜೇಂದ್ರ ಕಟಾರ ಅವರು, ಅಲ್ಲಿನ ವಾರ್ಡ್ ಬಾಯ್ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಇನ್ನೊಂದೆಡೆ, ಆಸ್ಪತ್ರೆ ಸಿವಿಲ್ ಸರ್ಜನ್ ಡಾ.ಯಶವಂತ್ ಧ್ರುವ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿ:ಮೂರನೇ ದಿನವೂ ಮುಂದುವರಿದ ರೋಗಿಗಳ ಸಾವಿನ ಸರಣಿ; ನಾಂದೇಡ್ ಆಸ್ಪತ್ರೆಯಲ್ಲಿ ಅಸುನೀಗಿದವರ ಸಂಖ್ಯೆ 35ಕ್ಕೆ ಏರಿಕೆ