ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅದೇ ಹುದ್ದೆಯಲ್ಲಿ ಮುಂದುವರೆಸಿದರೆ ನಿಷ್ಪಕ್ಷಪಾತ ತನಿಖೆ ನಡೆಯಲು ಹೇಗೆ ಸಾಧ್ಯ? ಎಂದು ಕೇಳಿದ್ದೆ. ಜತೆಗೆ ಆ ಅಧಿಕಾರಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿ ತನಿಖೆ ನಡೆಸಿ. ಅವರು ನಿರ್ದೋಷಿಗಳಾದರೆ ಅವರಿಗೆ ಮತ್ತೆ ಅದೇ ಜವಾಬ್ದಾರಿ ನೀಡಿ ಎಂದು ಹೇಳಿದ್ದೆ. ಈ ಕೆಲಸ ಮಾಡಲು ಸರ್ಕಾರಕ್ಕೆ 15 ದಿನಗಳು ಬೇಕಾಯಿತೇ? ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿ, ಇಂದು ಆದೇಶ ಹೊರಡಿಸಲಾಗಿದೆ ಎಂಬ ಮಾಹಿತಿ ಬಂದಿದೆ. ಆ ಮೂಲಕ ಸರ್ಕಾರ ಎಲ್ಲೋ ಒಂದು ಕಡೆ ಈ ಹಗರಣ ನಡೆದಿದೆ, ಅಧಿಕಾರಿಗಳು ಭಾಗಿಯಾಗಿದ್ದಾರೆ, ಸರ್ಕಾರದ ಪಾಲುದಾರಿಕೆ ಇದೆ ಎಂದು ಒಪ್ಪಿಕೊಳ್ಳುತ್ತಿರುವಂತಿದೆ. ದಿವ್ಯಾ ಹಾಗರಗಿ ಅವರು ಡಿ.ಕೆ.ಶಿವಕುಮಾರ್ ಅವರ ಜತೆಗಿರುವ ಫೋಟೋ ಬಿಡುಗಡೆ ಆಗಿತ್ತು. ಇಂದು ಬೇರೆ ಕಾಂಗ್ರೆಸ್ ನಾಯಕರ ಜತೆ ಇರುವ ಫೋಟೋ ಬಂದಿದೆ. ನಿನ್ನೆ ಪ್ರಧಾನಮಂತ್ರಿಗಳ ಜತೆಗಿನ ಫೋಟೋ ಬಿಡುಗಡೆ ಆಗಿತ್ತು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
‘ನಿನ್ನೆ ಬಿಜೆಪಿಯವರು ಬಿಡುಗಡೆ ಮಾಡಿದ ಫೋಟೋ 2018ರಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ನರ್ಸಿಂಗ್ ಕಾಲೇಜು ವಿಚಾರಕ್ಕೆ ಅಂದಿನ ಸಚಿವರಾದ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿರುವ ಬಗ್ಗೆ ಅವರೇ ಹಾಕಿಕೊಂಡಿದ್ದಾರೆ. ಬಿಜೆಪಿ ಐಟಿ ಸೆಲ್ ತಮಗೆ ಬೇಕಾದಷ್ಟು ವಿಚಾರ ಮಾತ್ರ ನೋಡುತ್ತಾರೆ. ದಿವ್ಯಾ ಅವರು ಯಾರ ಜತೆ ಫೋಟೋ ತೆಗೆಸಿಕೊಂಡಿದ್ದಾರೆ ಎಂಬುದು ಬೇರೆ ವಿಚಾರ. ಅವರು ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದು, ದಿಶಾ ಸಮಿತಿ ಸದಸ್ಯರಿಗೆ, ರಾಜ್ಯ ನರ್ಸಿಂಗ್ ಕೌನ್ಸಿಲ್ ಸದಸ್ಯರಾಗಿ ನಾಮನಿರ್ದೇಶನ ಮಾಡಿದ್ದರು ಎಂದರು.
ಅವರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಸೇರಿದ್ದಾರಾ? ಎಂಬುದು ಬೇರೆ ವಿಚಾರ. ಅವರಿಗೆ ನಿಜವಾಗಲೂ ಕಾಳಜಿ ಇದ್ದರೆ, ಅವರೊಬ್ಬರು ಆರೋಪಿ. ಪರೀಕ್ಷೆ ಬರೆದ 56 ಸಾವಿರ ಅಭ್ಯರ್ಥಿಗಳು ಕಂಗಾಲಾಗಿದ್ದು, ಆರೋಪಿಯನ್ನು ಬಂಧಿಸುವ ಬದಲು, ಇವರ ಜತೆ ಫೋಟೋ ಇದೆ ಎಂದು ಹೇಳುವುದರಲ್ಲಿ ಯಾವ ಅರ್ಥವಿದೆ. ಅವರ ಮಗನ ಮದುವೆಗೆ ಆಮಂತ್ರಣ ನೀಡಲು ಬಂದಿದ್ದರು.