ಭುವನೇಶ್ವರ (ಒಡಿಶಾ): ರಾಷ್ಟ್ರಪತಿ ದ್ರೌಪದಿ ಮುರ್ಮು ಎರಡು ದಿನಗಳಿಂದ ತಮ್ಮ ತವರು ರಾಜ್ಯ ಒಡಿಶಾ ಪ್ರವಾಸದಲ್ಲಿದ್ದಾರೆ. ಶುಕ್ರವಾರ ತಮ್ಮ ವಿದ್ಯಾರ್ಥಿ ಜೀವನದ ಹಲವು ಸವಿ ನೆನಪುಗಳನ್ನು ರಾಷ್ಟ್ರಪತಿ ಮೆಲುಕು ಹಾಕಿದ್ದಾರೆ. ತಾವು ಓದಿದ್ದ ಶಾಲೆ ಭೇಟಿ ಮತ್ತು ಸುಮಾರು 48 ವರ್ಷಗಳ ಹಿಂದೆ ತಮ್ಮೊಂದಿಗೆ ಕಲಿತಿದ್ದ ಸಹಪಾಠಿಗಳನ್ನೂ ಮುರ್ಮು ಭೇಟಿಯಾಗಿದ್ದಾರೆ.
ಶುಕ್ರವಾರ ಭುವನೇಶ್ವರದ ಅಲ್ಮಾ ಮೇಟರ್ ಯುನಿಟ್-2 ಕ್ಯಾಪಿಟಲ್ ಗರ್ಲ್ಸ್ ಹೈಸ್ಕೂಲ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿದರು. ಶಾಲೆಗೆ ಬಂದ ದೇಶದ ಮೊದಲ ಪ್ರಜೆಗೆ ವಿದ್ಯಾರ್ಥಿಗಳು, ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿದರು. ವಿಶೇಷ 13 ಜನ ಸಹಪಾಠಿಗಳು ರಾಷ್ಟ್ರಪತಿಯವರನ್ನು ಬರ ಮಾಡಿಕೊಂಡರು. ಶಾಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ತಮ್ಮ ಸ್ನೇಹಿತರೊಂದಿಗೆ ದ್ರೌಪದಿ ಮುರ್ಮು ಸಂವಾದ ನಡೆಸಿದರು.
![ಭುವನೇಶ್ವರದ ಶಾಲೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ](https://etvbharatimages.akamaized.net/etvbharat/prod-images/16903288_thum2222.jpeg)
ಇದೇ ಶಾಲೆಯಲ್ಲಿ ದೌಪದಿ ಮುರ್ಮು ಅವರು 1970-1974ರಲ್ಲಿ 8ನೇ ತರಗತಿಯಿಂದ 11ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದರು. ದೇಶದ ಅತ್ಯುನ್ನತ ಹುದ್ದೆಗೇರಿದ ದ್ರೌಪದಿ ಮುರ್ಮು ಸ್ವಾಗತಿಸಲು ಮತ್ತು ಭೇಟಿ ಮಾಡಲು ಅಂದು ಶಾಲೆಯಲ್ಲೆ ಅವರೊಂದಿಗೆ ಓದಿದ್ದ 13 ಜನ ಸ್ನೇಹಿತೆಯರು ಬಂದಿದ್ದರು. ತಮ್ಮ ಸಹಪಾಠಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮಧ್ಯದಲ್ಲಿರುವುದಕ್ಕೆ ದ್ರೌಪದಿ ಮುರ್ಮು ಸಂತೋಷವನ್ನು ವ್ಯಕ್ತಪಡಿಸಿದರು.
ದೌಪದಿ ಮುರ್ಮು ಬಗ್ಗೆ ತುಂಬಾ ಹೆಮ್ಮೆ: ದೌಪದಿ ಮುರ್ಮು ಭಾರತದ ರಾಷ್ಟ್ರಪತಿಯಾಗುತ್ತಾರೆ ಎಂದು ನಮಗೆ ತಿಳಿದಾಗ ಅದು ನಮಗೆ ಐತಿಹಾಸಿಕ ಕ್ಷಣವಾಗಿತ್ತು. ದೇಶದ ಪ್ರಥಮ ಪ್ರಜೆಯಾಗಿ 48 ವರ್ಷಗಳ ನಂತರ ಅವರನ್ನು ಭೇಟಿಯಾಗಲು ನಮಗೆ ತುಂಬಾ ಸಂತೋಷವಾಗಿದೆ. ನಾವು ದೌಪದಿ ಮುರ್ಮು ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ ಎಂದು ಸಹಪಾಠಿಯೊಬ್ಬರು ಸಂತಸ ವ್ಯಕ್ತಪಡಿಸಿದರು.