ನವದೆಹಲಿ: ಮ್ಯಾನ್ಹೋಲ್ಗಳು, ಚರಂಡಿಗಳು ಮತ್ತು ಗುಂಡಿಗಳಿಂದಾಗಿ ದೇಶಾದ್ಯಂತ ಸಾವು ಸಂಭವಿಸುತ್ತಿರುವ ಬಗ್ಗೆ ಸಮಗ್ರ ವರದಿ ಕೋರಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ ಹೆಚ್ಆರ್ಸಿ) ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ನೋಟಿಸ್ ನೀಡಿದೆ.
ಎನ್ಹೆಚ್ಆರ್ಸಿ ತನ್ನ ಆದೇಶದಲ್ಲಿ, ಪರಿಹಾರ ಮತ್ತು ಕನ್ವಿಕ್ಷನ್ ಕೇವಲ ಸಮಾಧಾನಕರವಾಗಬಹುದು. ಆದರೆ ಯಾವುದೇ ಕಾರಣಕ್ಕೂ ಮಾನವನ ಜೀವಕ್ಕೆ ಸರಿಸಮವಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಎಷ್ಟೊಂದು ಪ್ರಗತಿ ಸಾಧಿಸಿದ್ದರೂ ಸಹ ಚರಂಡಿಗಳನ್ನು ಬರಿಗೈಯಲ್ಲಿ ಸ್ವಚ್ಛಗೊಳಿಸುತ್ತಿರುವುದು ವಿಷಾದನೀಯ ಎಂದಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆಯೂ ಪ್ರಶ್ನಿಸಿದೆ.
ಮುಗ್ಧ ಪಾದಚಾರಿಗಳು ಅಥವಾ ಒಳಚರಂಡಿ ಕಾರ್ಮಿಕರ ಪ್ರಾಣ ರಕ್ಷಿಸಲು ಈ ತ್ವರಿತ ಕ್ರಮ ಕೈಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ವಕೀಲ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ರಾಧಾಕಾಂತ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯ ಕುರಿತು ತೀರ್ಪು ನೀಡುವಾಗ ಆಯೋಗ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ತ್ರಿಪಾಠಿ ತಮ್ಮ ಅರ್ಜಿಯಲ್ಲಿ ನೋಯ್ಡಾದ ಇಎಸ್ಐ ಆಸ್ಪತ್ರೆ ಬಳಿ ಬಾಬ್ಲು ವಾಲ್ಮೀಕಿ ಎಂಬಾತ ಮ್ಯಾನ್ಹೋಲ್ ಸ್ವಚ್ಛಗೊಳಿಸುವಾಗ ಅದರಲ್ಲಿ ಸಿಲುಕಿದ್ದ. ಆತನನ್ನು ರಕ್ಷಿಸಲು ಹೋದ ಹಣ್ಣಿನ ವ್ಯಾಪಾರಿ ಶ್ಯಾಮ್ವೀರ್ ಸಹ ಮ್ಯಾನ್ಹೋಲ್ನಲ್ಲಿ ಸಿಲುಕಿ ಮೃತಪಟ್ಟಿದ್ದರು ಎಂದು ಉಲ್ಲೇಖಿಸಿದ್ದರು. ಈ ಪ್ರಕರಣಗಳಲ್ಲಿ ಸಂಪೂರ್ಣ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು. ಈ ಮನವಿ ಆಧರಿಸಿ ಮಾನವ ಹಕ್ಕುಗಳ ಆಯೋಗ ಕೇಂದ್ರಕ್ಕೆ ನೋಟಿಸ್ ರವಾನಿಸಿದೆ.