ಮುಂಬೈ(ಮಹಾರಾಷ್ಟ್ರ): ಕರ್ನಾಟಕದಲ್ಲಿರುವ ಮಹಾರಾಷ್ಟ್ರ ಹೋರಾಟಗಾರರಿಗೆ ಅಲ್ಲಿನ ಸರ್ಕಾರ ಪಿಂಚಣಿ, ಸೌಲಭ್ಯ ಘೋಷಿಸಿದ ಬಳಿಕ ಉದ್ಭವವಾದ ಗಡಿ ಕಿತ್ತಾಟ ಈಗ ಮುಖ್ಯಮಂತ್ರಿಗಳ ಮಟ್ಟದಲ್ಲಿ ಹೇಳಿಕೆ- ಪ್ರತಿ ಹೇಳಿಕೆಗಳಿಗೆ ಕಾರಣವಾಗಿದೆ.
ಮಹಾರಾಷ್ಟ್ರದ ಜತ್ ತಾಲೂಕನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ ಬಳಿಕ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಇಲ್ಲಿನ ಒಂದು ಸಣ್ಣ ಹಳ್ಳಿಯೂ ಕೂಡ ಆ ರಾಜ್ಯಕ್ಕೆ ಸೇರಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಗಡಿ ವಿವಾದದ ಬಗ್ಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರ ರಾಜ್ಯದ ಸಮಗ್ರತೆಗೆ ಬದ್ಧವಾಗಿದೆ. ಇಲ್ಲಿನ ಯಾವೊಂದು ಜಾಗವೂ ಕರ್ನಾಟಕಕ್ಕೆ ಸೇರಲು ಬಿಡುವುದಿಲ್ಲ. ಮರಾಠಿ ಭಾಷಿಕರು ಇರುವ ಬೆಳಗಾವಿ ಮಾತ್ರವಲ್ಲದೇ, ಕಾರವಾರ, ನಿಪ್ಪಾಣಿಯ ಗ್ರಾಮಗಳ ಸೇರ್ಪಡೆಗೆ ನಮ್ಮ ಸರ್ಕಾರ ಹೋರಾಟ ಮಾಡಲಿದೆ ಎಂದು ಹೇಳಿದರು.
ಇತ್ತೀಗಷ್ಟೇ ಮಹಾರಾಷ್ಟ್ರ ಸರ್ಕಾರ ಕರ್ನಾಟಕದಲ್ಲಿರುವ ಮರಾಠಿ ಹೋರಾಟಗಾರರಿಗೆ ಪಿಂಚಣಿ, ಆರೋಗ್ಯ ವಿಮೆಯನ್ನು ನೀಡುವುದಾಗಿ ಘೋಷಿಸಿದೆ. ಇದರಿಂದ ಕೆರಳಿದ ಕರ್ನಾಟಕ ಸರ್ಕಾರ ಕೂಡ ಮಹಾರಾಷ್ಟ್ರದಲ್ಲಿನ ಕನ್ನಡ ಶಾಲೆಗಳ ಅಭಿವೃದ್ಧಿಗೆ ವಿಶೇಷ ನೆರವು, ಆ ರಾಜ್ಯದ ಕನ್ನಡಿಗ ಹೋರಾಟ ಹೋರಾಟಗಾರರಿಗೆ ಪಿಂಚಣಿ ನೀಡುವುದಾಗಿ ಘೋಷಿಸಿದೆ.
ಜೊತೆಗೆ ಕನ್ನಡ ಮಾತನಾಡುವ ಹೆಚ್ಚು ಜನರಿರುವ ಮಹಾರಾಷ್ಟ್ರದ ಜತ್ ತಾಲೂಕನ್ನು ರಾಜ್ಯಕ್ಕೆ ಸೇರ್ಪಡೆ ಮಾಡುವ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸರ್ಕಾರ ಹೇಳಿದೆ. ಇದು ಉಭಯ ರಾಜ್ಯಗಳ ಗಡಿ ವಿವಾದದ ಕಾವನ್ನು ಮತ್ತಷ್ಟು ಹೆಚ್ಚಿಸಿದೆ.
ಓದಿ: 'ಅಫ್ತಾಬ್ ನನ್ನ ಕೊಲೆ ಮಾಡ್ತಾನೆ, ಕಾಪಾಡಿ..' 2020ರಲ್ಲಿ ಶ್ರದ್ಧಾ ಬರೆದ ಪತ್ರ ಇಲ್ಲಿದೆ ನೋಡಿ